Tuesday, December 07, 2010

ಮಿಲನ



ನಿನದೊಂದು ಸ್ಪರ್ಶಕೆ
ಜೀವ ತಣಿದಿದೆ
ಮೈಯ ತುಂಬಾ
ರೆಕ್ಕೆ ಮೂಡಿದೆ
ಪೋಲಿ ಹೃದಯ
ಬೇಲಿ ದಾಟಿದೆ,,,

ಆಹ್: ಒಂದೊದು ಉಸಿರಲೂ ನಶೆಯೇ
ಕಣ್ತುಂಬಾ ಕನಸಿನ ಮಳೆಯೇ...
ನಿನ್ನ ತುಟಿಶಿಲ್ಪದ ಮೇಲೆ ಗುಟ್ಟೇಳುವಾಸೆ,,,
ಮುಂಗುರುಳ ಬನದಲ್ಲಿ ಮಿಂದೇಳುವಾಸೆ,,,

ಪ್ರೇಮಪುಷ್ಪ ಚಪ್ಪರದೊಳು
ಪ್ರಣಯ ಮಹೂರ್ತದ ವೇಳೆ,
ಪ್ರೀತಿಯ ವರಿಸುವೆ ಬಾರೇ,, ಒಮ್ಮೆ ನನ್ನ ಸೇರೇ,,,

ಮೈಗೆ ಮೈ ಸೋಕಿದೊಡೆ
ದಿಗಂತಗಳೆಲ್ಲಾ ದ್ವಂಸ,,,
ಚುಂಬನದ ಜೇನುನೊಣ
ಕೆನ್ನೆಯನೊಮ್ಮೆ ಕಚ್ಚಿದೊಡೆ
ಅಂಗಾಂಗ ರಮಿಸಿ, ಅಣುಕಣ
ಅಂಬರಕೆ ಅಪ್ಪುಗೆಯ ನೀಡುತಿದೆ,,,

ಆಹ್: ಒಂದೊಂದು ಕ್ಷಣವೂ ಮರಣವೇ
ನರನಾಡಿ ತಲ್ಪವೂ ಮೃತ್ಯುಕೂಪವೇ,,,
ನಿನ ನೀಳತೋಳ ಸೆಲೆಯಲ್ಲಿ ಮತ್ತೆ ತಬ್ಬಿ ಬದುಕುವಾಸೆ,,,
ನಿನ್ನ ನಯನ ಕಡಲ ಅಮೃತವಾ ಕುಡಿದು ಸಾವ ಗೆಲ್ಲುವಾಸೆ,,,

ಪ್ರೇಮಪುಷ್ಪ ಚಪ್ಪರದೊಳು
ಪ್ರಣಯ ಮಹೂರ್ತದ ವೇಳೆ,
ಪ್ರೀತಿಯ ವರಿಸುವೆ ಬಾರೇ,, ಒಮ್ಮೆ ನನ್ನ ಸೇರೇ,,,

                                                                                     - ಸಂಪತ್ ಕುಮಾರ್.

Friday, November 26, 2010

ಪ್ರೀತಿಯೆಂದೆನ್ನೆ ಕೋಮಲೆ...



ಹಸಿರುಮಾವು ಚಿಗುರಲಿ
ಚೈತ್ರವನದ ಕೋಗಿಲೆ
ಹಾಡುವಂತ ರಾಗವ,,,
ಮಾಘಮಾಸ ಬೆಳಗಲಿ
ಚುಮುಗುಡುವ ಚಳಿಯಲಿ
ಮೈ ಕೊರೆಯೋ ಮಂಜಿನಾಟವ,,,
ಬಲ್ಲೋರಾರು ಹೇಳೆಲೆ,
ಅರಿಯದಾದೆ ಕೇಳೆಲೆ...

ಜೀವ ಭಾವ ನಡುವಲಿ
ಸಕಲ ಸುಖದ ಮಡುವಲಿ
ಕಾಡುತಿಹ ವಿರಹವ,,,
ಈ ಜೀವನ ಬಲೆಯಲಿ
ಬಂಧು ಬಳಗ ಸುಳಿಯಲಿ
ತುಬ್ಬುತಿಹ ಏಕಾಂತವ,,,
ಪ್ರೀತಿಯೆಂದೆನ್ನೆ ಕೋಮಲೆ,
ಚುಂಬಿಸುವೆನು ಒಮ್ಮೆಲೇ,,,

ಹರನ ಜಟಾಪೊಟರೆಯಲಿ
ಸಿಲುಕಿಸೋತ ಗಂಗೆಯಲಿ
ಮೂಡಿದಂತ ಮಿಡಿತವ,,,
ಕಮಲ ಕೊಳದ ಬದುವಲಿ
ನೈದಿಲೆ ಮೈ ಮೃದುವಲಿ
ಮುತ್ತಿನನಿಯ ಕುಣಿತವ,,,
ಬಲ್ಲೋರಾರು ಹೇಳೆಲೆ,
ಅರಿಯದಾದೆ ಕೇಳೆಲೇ,,,

ಈ ಕಣ್ಣ ತೆರೆಯಲಿ
ನಿಂತ ನಿನ್ನ ಪಟದಲಿ
ಹುಡುಕದಾದ ಮೋಹವ,,,
ಕರ್ತೃ ಕರ್ಮ ವಿಧಿಯಲಿ
ಪ್ರಾತಃ ಸಂಜೆ ಪುಟದಲಿ
ಓದದಾದ ವಾಕ್ಯವ,,,
ಪ್ರೀತಿಯೆಂದೆನ್ನೆ ಕೋಮಲೆ,
ಬಿಗಿದಪ್ಪುವೆ ಒಮ್ಮೆಲೇ,,,

                                                                - ಸಂಪತ್ ಕುಮಾರ್

Thursday, October 14, 2010

ರತ್ನನ್ ಪದಗಳ್ - My Version


ಹೇಳ್ಕೋಳೋಕ್ ಒಂದ್ ಕಂಪನಿ
ಕೈಯ್ನಾಗ್ ಒಂದ್ ಕಂಪ್ಯೂಟರು
ಮಾಡೋಕೆ ಕೈತುಂಬಾ ಕೆಲ್ಸಾ...
ಗೂಗಲ್ನಾಗ್ ಹುಡ್ಕಾಡಿ
ಕಾಪಿ ಪೇಸ್ಟ್  ಆಟಾಡಿ
ಮುಗ್ಸಿದರಾಯ್ತು ಸಂಪನ್ ಪರಪಂಚಾ....

ಬಗ್ಸು ಫಿಕ್ಸಾದಾಗ
ಮತ್ತೆಚ್ಚಿ ಹೋದಾಗ
ಹಂಗೇನೇ ಪರಪಂಚದ್ ಅಂಚ
ಐ-ಪಾಡಲ್ಲಿ ಹಾಡ್ಕೇಳ್ತಾ 
ಕನ್ನಡದಲ್ ಪದವಾಡ್ತಾ
ಹಿಗ್ಗೋದು ಸಂಪನ್ ಪರಪಂಚಾ....

ವೀಕೆಲ್ಲಾ ಬೆವರ ಸುರ್ಸಿ
ಬಂದಿದ್ರಲ್ ಹೊಸಿ ಉಳ್ಸಿ
ವೀಕೆಂಡಲ್ ಉಳಿಹೆಂಡ  ಕೊಂಚ
ಮೈಯೆಲ್ಲಾ ಜುಮ್ ಅಂದ್ರೆ
ಸಂಡೇ ಗಂ ಗಂ ಅಂದ್ರೆ
ತುಂಬೋಯ್ತು ಸಂಪನ್ ಪರಪಂಚಾ....

ಪ್ರಾಜೆಕ್ಟೇನ್ ಗೊತ್ತಿಲ್ಲ
ಲಾಭದಾಗ್ ನಮ್ಗ್ ಪಾಲಿಲ್ಲ
ನಾವ್ ಕಂಡಿಲ್ಲ ತಂಚವಂಚಾ
ನಮ್ಮಷ್ಟಕ್ ನಾವಾಗಿ
ಇದ್ಡಿದ್ದ್ರಲ್ ಹಾಯಾಗಿ
ಬಾಳೋದು ಸಂಪನ್ ಪರಪಂಚಾ....

ಹೈಕ್ ಕೊಟ್ಟರೆ ಕೊಡಲಣ್ಣ
ಕೊಡದಿದ್ದರೆ ಬಿಡಲಣ್ಣ
ನಾವೆಲ್ಲಾ ಅವರಮುಂದೆ ಬಚ್ಚಾ
ಕೊಟ್ಟಿರೋ ಕೆಲ್ಸದಾಗೆ
ಕಣ್ಮುಚ್ಕೊಂಡ್ ಹೇಳ್ದಂಗೆ
ಕುಣಿಯೋದು ಸಂಪನ್ ಪರಪಂಚಾ....

                             - ಸಂಪತ್ ಕುಮಾರ್

Monday, October 11, 2010

ಕತ್ತಲೆ


ಅತ್ತಲಿದ್ದ ರವಿಯೊಬ್ಬ
ಇತ್ತೆಡೆಗೆ ಸರಿದೊಡೆ
ಧರೆಯ ಕತ್ತಲದು ಸಮಾಧಿ...     ಆದರೇನು ಮರುಳೆ???
ನಭಕಿಹರು ಸಾವಿರ ಸೂರ್ಯರು
ಬೆಳಗಬಲ್ಲುರೆ ನಭವಪೂರ
ಬೆಳಕದುವೆ ಭ್ರಮಿತ, ಕತ್ತಲೆಯೇ ಶಾಶ್ವತ... ಸತ್ಯವದು ಇರುಳೇ...

ಕತ್ತಲೆಯೇ ನನ್ನೊಲವು
ಕತ್ತಲೆಯೇ ನನ್ನರಿವು
ನನ್ನೆಲ್ಲ ಬದುಕು ಬಾಳೇ ಕತ್ತಲೆ... ಆದರೇನು ಮರುಳೆ???
ದೇಹದೊಳಗೂ ಕತ್ತಲೆ
ಧರೆಯಾಚೆಗೂ ಕತ್ತಲೆ
ನಡುವೆ ಬೆಳಕಲ್ಲಿ ಮಾತ್ರ ನಾ ಬೆತ್ತಲೆ... ಸತ್ಯವದು ಇರುಳೇ...

ಕೊಂಕನೆಲ್ಲ ಬಿಂಬಿಸುವ
ಜಗವನೆಲ್ಲ ತೋರಿಸುವ
ಬೆಳಕು ಜೀವಕ್ರಾಂತಿಯ ಮಾಡಿಹಳು... ಆದರೇನು ಮರುಳೆ???
ಒಡಲಲೆಲ್ಲವನು ಬಚ್ಚಿಟ್ಟು
ಮಡಿಲಲ್ಲಿ ಮಲಗಿಸುವಳು
ಪರಮಶಾಂತಿಯಲಿ, ಅವಳೇ ತಾಯಿ ಕತ್ತಲೆ... ಸತ್ಯವದು ಇರುಳೆ...

ದಿನಕೊಮ್ಮೆ ಬರುವ
ಬೆಳಕೆಂಬ ಭ್ರಮೆಯಲ್ಲಿ
ಬದುಕ ರೂಡಿಸಿಕೊಂಡರೆಮ್ಮವರು,.. ಆದರೇನು ಮರುಳೆ???
ಧನ್ಯರಿಗೆ ಮಾತ್ರ
ಬದುಕೆಲ್ಲ ಕವಿದಿಹಳು
ದಟ್ಟವಾಗಿ ತಾಯಿ ಕತ್ತಲೆ... ನಾನಂತೂ ಧನ್ಯ ಓ ಇರುಳೆ...
                                -ಕೆ. ಸಿ. ಸಂಪತ್ ಕುಮಾರ್...

Monday, September 27, 2010

ನಾನೊಬ್ಬ,,,


 ನಾನೊಬ್ಬ, ಓಡೋ ಅಶ್ವ
 ಗೆಲ್ಲೋದೊಂದೇ ನನ್ನ ಗುರಿ
 ಸೋಲೇನೇ ನನ್ನ ವೈರಿ
 ನಾನೊಬ್ಬ, ಹಸಿದ ಸಿಂಹ
 ಬೇಟೇನೇ ನನ್ನ ಗುರಿ
 ಹಿಡೀಬೇಕು ಎಷ್ಟು ಸಾರಿ ಬಿದ್ದರೂ ಸರಿ

 ನಾನೊಬ್ಬ, ಕಟುಕನ ಕೈಯ ಕತ್ತಿ
 ಬಲಿಪಶುವೇ ನನ್ನ ಗುರಿ
 ಸಾಯಿಸೋನೆ ನಾ ರಕ್ತದಲ್ಲೇ ಮಿಂದರೂ ಸರಿ
 ನಾನೊಬ್ಬ, ರೈತನ ನೇಗಿಲ ತುದಿ
 ಉಳುವುದೊಂದೇ ನನ್ನ ಗುರಿ
 ಸವೆದು ಸವೆದು  ನಾ ಮಣ್ಣಾದರೂ ಸರಿ

 ನಾನೊಬ್ಬ, ಆವಿಯಾದ ನೀರ ಹನಿ
 ನೆಲವೊಂದೇ ನನ್ನ ಗುರಿ
 ಮಳೆಯಾಗಲೇ ಬೇಕು ಋತುಗಳೆಷ್ಟೇ ಕಳೆದರೂ ಸರಿ
 ನಾನೊಬ್ಬ, ಪ್ರೇಮಿ ತುಟಿಯ ಮುತ್ತು
 ನಲ್ಲೆ ಕೆನ್ನೆಯೇ ನನ್ನ ಗುರಿ
 ನಾಚಿ ನಾಚಿ ಆಕೆ ನೀರಾದರೂ ಸರಿ

 ಸದ್ಯಕ್ಕೆ ನಾ, ಬೂದಿ ಮುಚ್ಚಿದ ಕಿಡಿ
 ತರ್ಕ ಬೇಡ, ಯಾವುದು ತಪ್ಪು ಯಾವುದು ಸರಿ?
 ಪದ್ಯ ಓದಿ ಸುಮ್ಮನೆ, ಸಣ್ಣದೊಂದು ನಗೆಯ ಬೀರಿ...
                        -ಸಂಪತ್ ಕುಮಾರ್