Friday, May 12, 2017

Meri Pyaari Bindu

ಹಾ, ಸೋತೆ ನಾನು, ನನ್ನ ಹೃದಯಾ...

Kannada version of the beautiful song 'Haa, Haareya Main, Dil Haareya' from the movie                
'Meri Pyaari Bindu'


Link to the original song: https://www.youtube.com/watch?v=TyMUY2CDrjc

ನೋಡಿದೆ ನಾ, ಚಂದ್ರಕಾಂತಿಯಾ
ಮಿನುಗೋ ಕೋಟಿ ಚುಕ್ಕಿ ತಾರೆಯಾ
ನಿನ್ನ ಹಾಗೆ ಯಾರೂ ಇಲ್ಲ, ಬಲ್ಲೆಯಾ...?

ಅನಿಸುತಿದೆ ನಿನ್ನ ಕಣ್ಣಿನಾಳದಿ
ಮುಳುಗದೆ ನಾ, ಉಳಿಯುವೆನೆ...
ನಾ ಪ್ರೀತಿಸುವುದ, ತಡೆಯೋಕೆ
ಈಗ ಯಾರಿಂದಾನ, ಸಾಧ್ಯವಾ...?

ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ನಾ,,, ಸೋತೆ, ನಿನಗೇ...
ಓ, ಸೋತೆ ನಾನು, ನನ್ನ ಹೃದಯಾ...
ಓ, ಸೋತೆ ನಾನು, ನನ್ನ ಹೃದಯಾ...
ಓ, ಸೋತೆ ನಾನು, ನನ್ನ ಹೃದಯಾ...
ನಾ,,, ಸೋತೆ, ನಿನಗೇ...
ನಾ,,, ಸೋತೆ, ನಿನಗೇ...
ಓಹೋ ಓ...
* * *

ಬಿಡಿಗಣ್ಣಿನಲ್ಲಿ ಕಾಣೋ,,, ಸಿಹಿ ಕನಸು ನೀನು.
ಎದೆಯಾಳಕೇ ಇಳಿದ,,, ಪ್ರೀತಿ ಮಾತು ನೀನು. 
ಬಿಡಿಗಣ್ಣಿನಲ್ಲಿ ಕಾಣೋ,,, ಸಿಹಿ ಕನಸು ನೀನು.
ಎದೆಯಾಳಕೇ ಇಳಿದ,,, ಪ್ರೀತಿ ಮಾತು ನೀನು. 

ನಿನ್ನ ಹೆಸರಿನಾ, ನಶೆ,,, ನಶೆ,,,
ನಾಲಿಗೆಗೆ ಹತ್ತಿಕೊಂಡಿದೆ.
ಈ ಮೋಹದಲ್ಲಿ, ಬೀಳುವಾಗ,,,
ತಡೆಯೋಕೇ, ನನ್ನಿಂದ ತಾನೇ, ಸಾಧ್ಯವಾ...?
 * * *

ನೋಡಿದೆ ನಾ, ಹೂವಿನಂದವಾ
ಘಮಿಸೋ ಹೂವ ಆ ಸುಗಂಧವಾ
ನಿನ್ನ ಹಾಗೆ ಯಾರೂ ಇಲ್ಲ, ಬಲ್ಲೆಯಾ...?

ಅನಿಸುತಿದೆ ನಿನ್ನ, ತೋಳುಗಳಲಿ
ಸೆರೆಯಾಗದೆ ನಾ, ಉಳಿಯುವೆನೆ.
ನಾ ಪ್ರೀತಿಸುವುದ, ತಡೆಯೋಕೆ
ಈಗ ಯಾರಿಂದಾನ, ಸಾಧ್ಯವಾ...?

ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ಹಾ, ಸೋತೆ ನಾನು, ನನ್ನ ಹೃದಯಾ...
ನಾ,,, ಸೋತೆ, ನಿನಗೇ...
ನಾ,,, ಸೋತೆ, ನಿನಗೇ...
ಓಹೋ ಓ...

                                                          - ಸಂಪತ್ ಕುಮಾರ್

Thursday, May 11, 2017

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ದಿನ-4: ಬೆಳಗಾವಿಯಿಂದ ಮಹಾಬಲೇಶ್ವರ )

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ

ಮೊದ ಮೊದಲು http://kcsampath.blogspot.in/2017/03/blog-post.html
ಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html 
ದಿನ-1: ಕನ್ಯಾಕುಮಾರಿಯಿಂದ ಮದುರೈ http://kcsampath.blogspot.in/2017/04/1.html
ದಿನ-2: ಮದುರೈಯಿಂದ ತುಮಕೂರು http://kcsampath.blogspot.in/2017/04/2.html
ದಿನ-3: ತುಮಕೂರಿನಿಂದ ಬೆಳಗಾವಿ http://kcsampath.blogspot.in/2017/05/3.html

ದಿನ-4: ಬೆಳಗಾವಿಯಿಂದ ಮಹಾಬಲೇಶ್ವರ 

17 ಜನವರಿ 2017
ಮಂಗಳವಾರ


        ಬೆಳಗಾವಿಯ ಬೆಳಗಲ್ಲಿ, ಬೇಗ ಏಳಲಿಲ್ಲ ನಾನು.
        ನಾನು ಹೊರಡುವಷ್ಟರಲ್ಲಿ, ಎಲ್ಲರೂ ಹೇಳಿದ್ದ ಸಮಯಕ್ಕೆ ಅರ್ಧ ತಾಸಿಗೂ ಹೆಚ್ಚು ತಡವಾಗಿ, ಅವರು ನಾಲ್ವರನ್ನೂ ಕಾಯಿಸಿಬಿಟ್ಟೆ.

        "ನಾನು ರೆಡಿ, luggage ಎಲ್ಲ ತೆಗೆದುಕೊಂಡು ಬನ್ನಿ, check-out ಮಾಡುವಾ" ಎಂದು, ಅವರಿಬ್ಬರ ರೂಮುಗಳಿಗೂ ಫೋನ್ ಮಾಡಿ ಹೇಳಿ, ನನ್ನ ಲಗೇಜನ್ನೆಲ್ಲ ಹೊತ್ತುಕೊಂಡು ಹೋಟೆಲ್ reception ಹತ್ರ ಬಂದೆ.

        ನನ್ನ ತಪ್ಪಿಗೆ, ನನ್ನನ್ನು ಇಡೀ ದಿನ ಬಯ್ಯಲು, ಎಲ್ಲರಿಗೂ ಅವಕಾಶ ಸಿಕ್ಕಿತ್ತು. ಇಡೀ ದಿನ ನಾನು ತಿರುಗಿ ಮಾತಾಡದಷ್ಟು, ಅವರು ರೇಗಿಸುವರೆಂದು ಅರ್ಥವಾಗಿತ್ತು.
        ಎಲ್ಲರೂ ಬಂದು, ಲಗೇಜನ್ನೆಲ್ಲ ಬೈಕುಗಳಿಗೆ ಕಟ್ಟಿ, ಹೋಟೆಲಿನವರು ಆಫರ್ ಮಾಡಿದ್ದ complementary breakfast ತಿನ್ನಲು ಪಕ್ಕದಲ್ಲಿದ್ದ restaurant ಗೆ ನೆಡೆದೆವು.

        ನಿನ್ನೆ ತುಮಕೂರಿನಲ್ಲೇ ತಟ್ಟೆ ಇಡ್ಲಿ ತಿಂದು ಬಂದಿದ್ದ ನಾವು, ಈಗ "ತುಮಕೂರು ಇಡ್ಲಿ ಸೆಂಟರ್" ಹೆಸರಿನ ಹೋಟೆಲಿಗೆ ಬಂದಿದ್ದೆವು. ಅಲ್ಲಿ ಏನ್ ಸಿಗುತ್ತೆ ತಿಂಡಿಗೆ ಅಂದ್ರೆ, "ಸಾರ್, ತಟ್ಟೆ ಇಡ್ಲಿ ಇಲ್ಲಿನ ಸ್ಪೆಷಲ್" ಅಂದ ಅಲ್ಲಿನ ಸರ್ವರ್. "ನಿನ್ನೆ ತುಮಕೂರಲ್ಲೇ ತಿಂದು ಬಂದಿದೀವಿ ಗುರು" ಅಂತ ಹೇಳಿ, ಆದ್ರೂ ಒಂದೆರಡು ತಟ್ಟೆ ಇಡ್ಲಿ ಜೊತೆಗೆ, ದೋಸೆ ಆರ್ಡರ್ ಮಾಡಿ, breakfast ಮುಗಿಸಿದೆವು.

        ಇಂದಿನ ನಮ್ಮ ಪಯಣ ಬೆಳಗಾವಿಯಿಂದ ಮಹಾಬಲೇಶ್ವರಕ್ಕಿದ್ದು, 320km ಸಾಗಬೇಕಿತ್ತು. ಸುಮಾರು ಆರು ತಾಸಿನಲ್ಲಿ ನಾವಲ್ಲಿಗೆ ತಲುಪಬಹುದೆಂದುಕೊಂಡೆವು. ಈಗಿನ್ನು ಬೆಳಗಿನ 8.30, ಬಿಸಿಲೇರುವುದಕ್ಕೆ ಮುಂಚೆಯೇ ನಾವು ಹೊರಟಂತಾಯಿತು.




        ಬೆಳಗಾವಿಯ ಹೊರವಲಯದಲ್ಲಿ, ಪೆಟ್ರೋಲ್ ತುಂಬಿಸಿಕೊಳ್ಳಲು ನಿಂತೆವು. ಅಲ್ಲೇ ಪಕ್ಕದಲ್ಲಿದ್ದ Emission Test ಶಾಪ್ ನೋಡಿ, ನಮ್ಮ ಎಲ್ಲರ ಬೈಕುಗಳ ಎಮಿಷನ್ ಸರ್ಟಿಫಿಕೇಟ್ expire ಆಗಿರುವುದರ ನೆನಪಾಯಿತು. ಈಗ ಬೆಳಗಾವಿಯಿಂದ ತುಸು ಮುಂದೆ ಹೋದರೆ, ನಮ್ಮ ಗಡಿ ದಾಟಿ ಬೇರೆ ರಾಜ್ಯ ಸಿಗುತ್ತದೆ. ಇಲ್ಲಿಂದ ಮುಂದೆ ಎಲ್ಲಿಯೇ ಆದರೂ ಪೊಲೀಸರು ಹಿಡಿದರೆ, ನಮ್ಮಲ್ಲಿದ್ದ ಒಂದು document ಸರಿಯಿಲ್ಲವಾದರೂ ನಮಗೇ ತಾಪತ್ರಯ ಅಂದುಕೊಂಡು. Emission Test ಮಾಡಿಸಿಕೊಂಡೆವು.
        ಆ ಶಾಪ್,  ಒಂದೇ ಒಂದು ಚಿಕ್ಕ ಮಳಿಗೆ. ಅದರೊಳಗೆ ಸಣ್ಣ ಟೀ ಅಂಗಡಿಯನ್ನೂ ನೆಡೆಸುತ್ತಾ, ಎಮಿಶನ್ ಟೆಸ್ಟ್ ಕೂಡ ಮಾಡಿಕೊಡುತ್ತಾ, ಆ ಶಾಪ್ ನೆಡೆಸುತ್ತಿದ್ದವನು, ಸುಮಾರು 23 ವಯಸ್ಸಿನ ಹುಡುಗ. ಆತನ ಭಾಷೆ ಬೆಳಗಾವಿಯ ಕನ್ನಡದಂತಿರಲಿಲ್ಲ. "ಯಾವೂರು ನಿಮ್ಮದು" ಅಂತ ಕೇಳಿದಾಗ, "ನನ್ನದು ಉಡುಪಿಯ ಹತ್ತಿರ ಒಂದು ಹಳ್ಳಿ. ಈಗೊಂದು ಆರು ತಿಂಗಳಿಂದ ಈ ಅಂಗಡಿ ನೆಡೆಸಿಕೊಂಡು ಇದೀನಿ" ಅಂದ. ಅಲ್ಲದೆ ತಾನು BCA ಮುಗಿಸಿರುವುದಾಗಿಯೂ, ನಾಳೆ ಒಂದು ಕೆಲ್ಸಕ್ಕೆ ಇಂಟರ್ವ್ಯೂಗೆ ಹೋಗಬೇಕಿರುವುದಾಗಿಯೂ ತಿಳಿಸಿದ.
        ಮತ್ತೆ, ಅಲ್ಲಿಗೆ ಕೆಲಸಕ್ಕೆ ಹೋದರೆ, ಈ ಅಂಗಡಿಯನ್ನು ಏನು ಮಾಡುವುದಾಗಿ ಕೇಳಿದಾಗ, "ಇದು ನನ್ನ ಸ್ವಂತದಲ್ಲ, ಬೇರೆ ಕೆಲಸ ಸಿಗುವುವರೆಗೂ ಈ ಅಂಗಡಿ ನೆಡಿಸಿಕೊಂಡು, ಕೆಲಸಕ್ಕೆ ಇದ್ದೀನಿ".
        "ನಾನು ಬಿಟ್ಟು ಹೋದ ಮೇಲೆ, ಇನ್ನೊಬ್ಬನನ್ನ ಹುಡುಕಿಕೊಳ್ತಾರೆ ನಮ್ಮ ಓನರ್" ಅಂದ. 
         ಯಾವ ಮುಜುಗರವೂ ಇಲ್ಲದೇ, ಬೇರೊಂದು ಊರಿಗೆ ಬಂದು, ಆ ರೋಡ್ ಸೈಡಿನ ಚಿಕ್ಕ ಮಳಿಗೆಯಲ್ಲೇ ಇದ್ದುಕೊಂಡು, ಟೀ ಅಂಗಡಿ-ಎಮಿಶನ್ ಟೆಸ್ಟ್ ಎಲ್ಲ ಮಾಡಿಕೊಳ್ಳುತ್ತ, ಜೊತೆಗೆ ತನ್ನ ಓದಿಗೆ ಸರಿಯಾದ ಕೆಲಸವನ್ನೂ ಹುಡುಕುತ್ತಾ, ಭವಿಷ್ಯ ರೂಪಿಸಿಕೊಳ್ಳಲು ನಿಂತಿದ್ದ ಆತನನ್ನು ಕಂಡು ಖುಷಿಯಾಯಿತು. ಒಂದು friendly appreciate ಮಾಡುವ ಮನಸ್ಸಾಯಿತು, ಆದರೆ ಉಳಿದವರು ಸ್ವಲ್ಪ over acting ಮಾಡ್ತಿದಾನೆ ಅಂದುಕೊಳ್ತಾರೆ, ಅಂತ ಸುಮ್ಮನೆ ಒಂದು ಥ್ಯಾಂಕ್ಸ್ ಹೇಳಿ ಹೊರಟುಬಂದೆ. 

        ಹೈವೇ ತುಂಬಾ ಚೆನ್ನಾಗಿತ್ತು. ಒಂದಷ್ಟು ದೂರ ಸಾಗಿದ ಮೇಲೆ, ಕರ್ನಾಟಕ ಗಡಿ ದಾಟಿ ಮಹಾರಾಷ್ಟ್ರಕ್ಕೆ ಸ್ವಾಗತದ ಬೋರ್ಡು ಸಿಕ್ಕಿತು. ಇಲ್ಲಿಗೆ ಎರಡು ರಾಜ್ಯಗಳನ್ನು ದಾಟಿದಂತಾಯ್ತು, ನಮ್ಮ ಪ್ರವಾಸದಲ್ಲಿ.

        ಸುಮಾರು 11.30ರ ವೇಳೆಗೆ ಕೊಲ್ಲಾಪುರ ತಲುಪಿದೆವು. ಶರತ್ ಗೆ ಅವರ ಬೈಕಿನ mileage drop ಆಗಿರುವ ಭಾಸವಾಗಿತ್ತು. ಬೈಕು half clutch ನಲ್ಲಿ ಸಾಗುತ್ತಿರುವ ಅನುಮಾನ ಬಂದು, ಕೊಲ್ಲಾಪುರದಲ್ಲೊಮ್ಮೆ RE ಸರ್ವಿಸ್ ಸೆಂಟರಲ್ಲಿ check ಮಾಡಿಸಿಕೊಂಡು ಹೋಗೋಣವೆಂದು, ತಿಳಿಸಿದರು. ನಮ್ಮ ಮೂವರಲ್ಲಿ ಶರತ್-ಶ್ವೇತಾ ಮುಂದೆ ಸಾಗುತ್ತಿದ್ದವರು, ಮ್ಯಾಪಿನಲ್ಲಿ ಹುಡುಕಿಕೊಂಡು ಸೀದಾ ಸರ್ವಿಸ್ ಸೆಂಟರಿಗೆ ನೆಡೆದರು. ಶಿವು-ದೀಪಿಕ ಮತ್ತು ನಾನು ಅವರನ್ನು ಹಿಂಬಾಲಿಸಿದೆವು.

        ಕೊಲ್ಲಾಪುರದ RE ಸರ್ವಿಸ್ ಸೆಂಟರ್ ಅದಾಗಲೇ, ಜನರಿಂದ ತುಂಬಿ ಹೋಗಿತ್ತು. ಆದರೂ ನಾವು ಹೋಗಿ, ಅಲ್ಲಿನ ಮ್ಯಾನೇಜರ್ ಗೆ ನಮ್ಮ ಪ್ರವಾಸದ ವಿಷಯ ತಿಳಿಸಿ, ಶರತ್ ರ ಬೈಕಿನ ಕೆಲಸ ಮಾಡಿಕೊಡಬೇಕಾಗಿ ಕೇಳಿದೆವು. ಆ ಮ್ಯಾನೇಜರ್ ಇನ್ನು ಒಂದು ತಾಸು ಬೇಕಾಗುತ್ತದೆ ಎಂದ. ಆಗಲಿ ಎಂದು ನಾವೆಲ್ಲರೂ ಅಲ್ಲೇ ರಸ್ತೆಯಲ್ಲೇ ಬೈಕುಗಳನ್ನು ನಿಲ್ಲಿಸಿಕೊಂಡು ಕಾಯತೊಡಗಿದೆವು.

        ಪ್ರತಿ ವರ್ಷ ನೆಡೆಯುವ Royal Enfield Riders Mania Event ಈ ಬಾರಿ ಕೊಲ್ಲಾಪುರದಲ್ಲಿ, ಇನ್ನೇನು ಕೆಲವು ದಿನದಲ್ಲೇ ಆಯೋಜನೆಗೊಳ್ಳಲಿತ್ತು.  ಹಾಗಾಗಿಯೇ ಅಲ್ಲಿ ಅಷ್ಟೊಂದು ಜನರು ಮತ್ತು ಬೈಕುಗಳಿದ್ದವು. Royal Enfield ಕಂಪನಿಯು, ಭಾರತದಾದ್ಯಂತ ಆಯ್ದ ಒಂದು ಜಾಗದಲ್ಲಿ ವರ್ಷಕ್ಕೊಮ್ಮೆ ಈ ಕೂಟವನ್ನು ಆಯೋಜಿಸುತ್ತದೆ. ಹವ್ಯಾಸಿ ಸವಾರರೆಲ್ಲರೂ ಒಂದು ಕಡೆ ಸೇರಿ, RE ಬೈಕುಗಳ ಒಂದು ಜಾತ್ರೆಯಂತಿರುತ್ತದೆ. ಹಲವಾರು ರೀತಿಯ ಪಂದ್ಯಗಳು,  ಪ್ರದರ್ಶನಗಳು, ಬಹುಮಾನಗಳು, ಸಂಗೀತ, ಕುಣಿತ ಮೋಜು ಎಲ್ಲವೂ ಇರುತ್ತದೆ ಅಲ್ಲಿ.

        ಅಲ್ಲಿ Service Centreನಲ್ಲಿದ್ದ ಹಲವಾರು ಜನ, ನಮ್ಮ ಪ್ರವಾಸದ ಬಗ್ಗೆ ವಿಚಾರಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
        ನಾವು ಸುಮಾರು ಒಂದು ಗಂಟೆ ಕಾದರೂ, ಶರತ್ ರ ಬೈಕನ್ನು ಇನ್ನೂ ಒಳಗಡೆಗೇ ತೆಗೆದುಕೊಂಡು ಹೋಗಿರಲಿಲ್ಲ. ಆಗ ಮತ್ತೆ ಆ ಮ್ಯಾನೇಜರ್ ಬಳಿ request ಮಾಡಿಕೊಳ್ಳಬೇಕಾಯಿತು, ಶರತ್ ಆತನಿಗೆ ನಮ್ಮ ಪರಿಸ್ಥಿತಿಯನ್ನು ಮತ್ತೆ ವಿವರಿಸಿದ ಮೇಲೆ, ಬೈಕನ್ನು ತೆಗೆದುಕೊಂಡು ಒಳ ಹೋದರು.

        ಆಗ ಅಲ್ಲಿಗೆ ತನ್ನ ಬೈಕಿನೊಂದಿಗೆ ಬಂದಿದ್ದ ಒಬ್ಬ ವ್ಯಕ್ತಿ ನಮ್ಮೊಡನೆ, ಮಾತಿಗಿಳಿದ. ಏನು ಸಮಸ್ಯೆಯಾಗಿದೆ, ಯಾಕೆ ಕಾಯುತ್ತಿದ್ದೀರಿ, ಎಲ್ಲಿಗೆ ಹೋಗುವವರಿದ್ದೀರಿ, ಎಂದೆಲ್ಲ ವಿಚಾರಿಸತೊಡಗಿದ.
        ಎತ್ತರದ ಸದೃಢ ಮೈಕಟ್ಟು, Low fade ಹೇರ್ ಸ್ಟೈಲ್, Balbo Beard & ಮೀಸೆ, ಬಿಳಿ ಶರ್ಟ್, ಮೊಣಕೈವರೆಗೆ ಮಡಿಚಿದ್ದ ತೋಳಲ್ಲಿ ಎದ್ದು ಕಾಣುವ Tattoo,,, Typical Hansome Biker ನಂತೆ ಆತ ಕಾಣುತ್ತಿದ್ದ. ನಮ್ಮ ಪರಸ್ಪರ ಪರಿಚಯದ ಬಳಿಕ, ಆತನ ಹೆಸರು ಓಂಕಾರ್ ಬುಧಾಳೇ ಎಂಬುದಾಗಿಯೂ, ಆತ Passionate Enfield Rider ಎಂದು ತಿಳಿಯಿತು.
        ಅಷ್ಟರಲ್ಲಿ ಅಲ್ಲಿದ್ದ ಮ್ಯಾನೇಜರ್ ಹೇಳಿದ, "ಇವರು ಕಳೆದ ಮೂರು ಬಾರಿಯಿಂದಲೂ RE Rider Mania Champion" ಅಂತ.
        ಆತನ Humble n Friendly ವ್ಯಕ್ತಿತ್ವ ನೋಡಿ ಆಶ್ಚರ್ಯವಾಯಿತು. ಆತ ತನ್ನ ಹಲವು ರೈಡ್ ಅನುಭವಗಳನ್ನು ನಮ್ಮೊಡನೆ ಹಂಚಿಕೊಂಡು, ನಮ್ಮ ಪ್ರವಾಸಕ್ಕೆ ಶುಭ ಕೋರಿದ. ನಾವು ಹೋಗುಲಿರುವ Route map ಕೇಳಿ, ಆತನಿಗೆ ಅಲ್ಲೆಲ್ಲಾ ರೈಡರ್ ಫ್ರೆಂಡ್ಸ್ ಇರುವುದಾಗಿಯೂ, ಮುಂದೆ ದೆಹಲಿಯವರೆಗೂ ಎಲ್ಲಿಯೇ ನಮಗೆ ತೊಂದರೆಯಾದರೂ, ಆತನಿಗೆ ತಿಳಿಸಿದಲ್ಲಿ, ಆತ ತನ್ನ ಸ್ನೇಹಿತರಿಂದ ಸಹಾಯ ಒದಗಿಸುವುದಾಗಿ ಭರವಸೆ ಕೊಟ್ಟನು. ಆ ಕ್ಷಣಕ್ಕೆ Royal Enfield is a family ಎನ್ನುವ feeling ಬಂತು. ಆತ ಹೊರಡುವ ಮುಂಚೆ ಆ Champion Rider ಜೊತೆ ಒಂದು selfie ತೆಗೆದುಕೊಂಡೆವು.

        ಇನ್ನಷ್ಟು ಹೊತ್ತು ಕಾದ ಮೇಲೂ ಬೈಕು ರಿಪೇರಿಯಾಗಲಿಲ್ಲ. ಸಮಯ ಮಧ್ಯಾಹ್ನ 1 ಗಂಟೆಯಾದರೂ ಮುಗಿಯಲಿಲ್ಲವಲ್ಲ ಎಂದು ಕೇಳಿದಾಗ, ಈಗ 1-2 lunch break ಇರುತ್ತೆ, ಆಮೇಲೆನೇ ರಿಪೇರಿ ಮುಗಿಸ್ತೀವಿ ಅಂದರು. ಬೇರೇನೂ ಮಾಡುವಂತಿರಲಿಲ್ಲ, ನಾವೂ ಊಟ ಮಾಡಲು ಹೋಗುವುದಾಗಿ ತೀರ್ಮಾನಿಸಿದೆವು.
        ಅಲ್ಲಿ ಪಕ್ಕದಲ್ಲಿದ್ದ hardware ಅಂಗಡಿಯ ವ್ಯಕ್ತಿ ನಮಗೆ ಎರಡು ಹೋಟೆಲುಗಳನ್ನು ಸೂಚಿಸಿ, ಒಂದು ಸ್ವಲ್ಪ ಲಕ್ಸುರಿ ಹೋಟೆಲ್, ಇನ್ನೊಂದು ಸಾಧಾರಣ ಹೋಟೆಲ್. ಎರಡೂ ಎದುರು ಬದುರಿಗಿವೆ, ನಿಮಗೆ ಯಾವುದು ಬೇಕೋ ಅದಕ್ಕೆ ಹೋಗಿ, ಎರಡರಲ್ಲೂ ಊಟ ಚೆನ್ನಾಗಿರುತ್ತದೆ ಎಂದು ತಿಳಿಸಿದರು.
        ಒಂದೂವರೆ ಕಿಲೋಮೀಟರ್ ದೂರವಿದ್ದ ಹೋಟೆಲಿಗೆ, ಇನ್ನೂ ಸಮಯವಿದ್ದಿದ್ದರಿಂದ, ಬೈಕುಗಳನ್ನು ಅಲ್ಲಿಯೇ ನಿಲ್ಲಿಸಿ ನಾವು ಆರಾಮವಾಗಿ ನೆಡೆದುಕೊಂಡು ಹೊರಟೆವು.

ಮಹಾರಾಣಿ ತಾರಾಬಾಯಿ
        ನೆಡೆಯುತ್ತಾ ಸಾಗುವಾಗ ಎದುರಿಗೆ ಸಿಕ್ಕ ಒಂದು circle ನಲ್ಲಿ, ರಾಣಿಯೊಬ್ಬರ ಪ್ರತಿಮೆಯಿತ್ತು. ಯಾರ ಪ್ರತಿಮೆಯೆಂದು ಹಾಗೇ ರಸ್ತೆ ದಾಟುತ್ತಲೇ, ಪ್ರತಿಮೆಯ ಕೆಳಗಿದ್ದ ಬೋರ್ಡಿನ ಕಡೆಗೆ ಕಣ್ಣು ಹಾಯಿಸಿದೆ. 'ಮಹಾರಾಣಿ ತಾರಾಬಾಯಿ' ಎಂಬ ಹೆಸರಿತ್ತು. ನನಗಾಗ ಆಕೆ ಮರಾಠಾ ರಾಣಿಯೆಂದು, ಯಾವುದೋ ಕಾದಂಬರಿಯಲ್ಲಿ ಓದಿದ ನೆನಪಾಯಿತು. ಆದರೆ ಅಷ್ಟು ವಿವರವಾಗಿ ಹೊಳೆಯಲಿಲ್ಲ.
        (* ಆ ದಿನ ರಾತ್ರಿ  ಮಹಾಬಲೇಶ್ವರ ತಲುಪಿ ಹೋಟೆಲ್ ರೂಮಿನಲ್ಲಿ ವಿರಮಿಸುತ್ತಿದ್ದಾಗ, ಆಕೆಯ ಬಗ್ಗೆ internet ನಲ್ಲಿ ಹುಡುಕಿದಾಗ ತಿಳಿಯಿತು, ಆಕೆ ಶಿವಾಜಿ ಮಾಹಾರಾಜರ ಮಗ ರಾಜಾರಾಮ ಭೋಸಲೆಯ ಪತ್ನಿಯೆಂದು. ನಂತರ ನಾನು ಓದಿದ್ದ, "ಶಿವಪ್ರಭುವಿನ ಪುಣ್ಯ" ಎಂಬ ಕಾದಂಬರಿಯಲ್ಲಿನ, ಶಿವಾಜಿಯ ಮರಣಾನಂತರದ ಪರಿಸ್ಥಿತಿಯ ಬಗೆಗಿನ ವಿಷಯಗಳು ನೆನಪಾದವು. *)

        ನೆಡೆದು ಬಂದು, ಹೋಟೆಲುಗಳ ಎದುರಿಗೆ ನಿಂತು ಎದುರು ಬದುರಿಗಿದ್ದ ಎರಡೂ ಹೋಟೆಲುಗಳನ್ನು ನೋಡಿ, "ಹೋಟೆಲ್ ಮಿರ್ಚಿ" ಎಂದು ಬೋರ್ಡಿದ್ದ ಸಾಧಾರಣ ಹೋಟೆಲ್ ಸಾಕು ನಮ್ಮ ಊಟಕ್ಕೆ ಎಂದು, ಒಳಗೆ ನೆಡೆದೆವು.

        ನಮಗಾರಿಗೂ Restaurant with luxury ambiance ಬೇಕೆನಿಸಲಿಲ್ಲ, ಮರಾಠಿ ಶೈಲಿಯ ಸರಳ ಊಟ ಸಾಕಿತ್ತು. ನಮ್ಮಲ್ಲಿ ಯಾರೊಬ್ಬರೂ ಏನೂ ಚಕಾರವೆತ್ತಲಿಲ್ಲ, ನಮಗೆ ಸರಳತೆಯಲ್ಲೇ ಖುಷಿ ಎನಿಸಿತು. ಆಗ ನನಗೆ ಅಲ್ಲಿ ಕುವೆಂಪುರವರ ಒಂದು ಪದ್ಯದ ಈ ಸಾಲುಗಳು ಅರೆಬರೆಯಾಗಿ ನೆನಪಾದವು.
ಸಾಮಾನ್ಯತಾ ಸುಖವೇ ಶಾಂತಿ ಜೀವಾಧಾರ;
ಸಾಮಾನ್ಯತೆಯೇ ಜಗನ್ ಮಾನ್ಯತಾ ಸಂಸಾರ!!!
                                                                 - ಕುವೆಂಪು

        ಕಾಂಪೌಂಡ್ ಗೋಡೆಯ ಮೇಲೆ ಕಮಾನು ಕಟ್ಟಿ, ನೆರಳಿಗೆಂದು ಹಸಿರುಬಣ್ಣದ ತೆಳು ಪ್ಲಾಸ್ಟಿಕ್ ನೂಲಿನ ಬಟ್ಟೆಯನ್ನು ಮುಚ್ಚಿ, ಒಳಗೆ ತುಸು ತಂಪಾಗಿರುವಂತೆ ಆ ಹೋಟೆಲಿನಲ್ಲಿ ವ್ಯವಸ್ಥೆ ಮಾಡಿದ್ದರು. 
        ಇದ್ದ ನಾಲ್ಕೈದು ಟೇಬಲ್ಲಿನಲ್ಲಿ, ಹಲವರು ಕೂತಿದ್ದರು. ನಮಗೂ ಒಂದು ಟೇಬಲ್ ತೋರಿಸಿ, ಕೂರಲು ಹೇಳಿ, ಒಬ್ಬ ಹುಡುಗ ಆರ್ಡರ್ ತೆಗೆದುಕೊಳ್ಳಲು ಬಂದ. ನಾವು  ಮೆನು ನೋಡುತ್ತಾ ಇಲ್ಲಿನ ಮರಾಠಿ ಸ್ಪೆಷಲ್ ಟ್ರೈ ಮಾಡೋಣ, ಅಂತ ಮಾತಾಡಿಕೊಳ್ಳುತ್ತಿದ್ದೆವು. ಆಗ ನಮ್ಮ ಮಾತು ಕೇಳಿಸಿಕೊಂಡು ಆತ, ಕನ್ನಡದಲ್ಲಿಯೇ ಏನೇನು ಚೆನ್ನಾಗಿರುತ್ತೆ ಎಂದು ತಿಳಿಸಿ ಹೇಳಿದ. ನಾವು ಆಗಲಿ ಎಂದು ಅವೆಲ್ಲವನ್ನೂ ತರಲು ಹೇಳಿದೆವು.
        ಆತ ಬೆಳಗಾವಿಯನೆಂದೂ, ಅಲ್ಲದೆ ಅದು ಗಡಿಭಾಗವಾದ್ದರಿಂದ, ಹಲವಾರು ಜನರಿಗೆ ಕನ್ನಡ ಬರುತ್ತದೆಂದೂ ತಿಳಿಸಿದ.

       ಒಂದತ್ತು ನಿಮಿಷ ಕಾದ ಬಳಿಕ ನಮ್ಮ ಊಟ ಬಂದಿತು. ನಾವು ಅಲ್ಲಿ ತಿಂದ, ನೆನಪಿನಲ್ಲಿಟ್ಟು ಹೇಳಬಹುದಾದ ವಿಶೇಷ ತಿನಿಸುಗಳೆಂದರೆ ಶೆವಗಾ ಫ್ರೈ ಎಂಬ ಸ್ಟಾರ್ಟರ್, ಕೊಲ್ಲಾಪುರದ 'ವೆಜ್ ಕೋಲ್ಹಪುರಿ', ಫೋಡ್ನಿಬಾತ್ ಮತ್ತು ಅಕ್ಕಾಸೀಸೂನ್.


ಶೇವಗಾ ಫ್ರೈ



        ವೆಜ್ ಕೋಲ್ಹಪುರಿ, ನಮಗೆಲ್ಲ ಗೊತ್ತೇ ಇದೆ. ಇನ್ನು ಶೇವಗಾ ಬಗ್ಗೆ ಹೇಳಬೇಕೆಂದರೆ ಅದು, ನುಗ್ಗೆಕಾಯಿಯನ್ನು ಕತ್ತರಿಸಿ ಬೇಯಿಸಿ, ಎಣ್ಣೆಯಲ್ಲಿ ಶೇಂಗಾ ಪುಡಿಯೊಂದಿಗೆ ಉರಿದು, ಮಾಡಲಾಗಿದ್ದ starter. ಫೋಡ್ನಿಬಾತ್ ಒಂದು ವಾಂಗೀಬಾತ್ ಶೈಲಿಯ ಪುಲಾವ್, ಅಕ್ಕಾಸೀಸೂನ್ ಅಂದರೆ ಹೆಸರುಕಾಳಿನ ಒಂದು ರೀತಿಯ ಪಲ್ಯ. ಎಲ್ಲವೂ ಒಂಥರಾ ಹೊಸ ರುಚಿ, ನಮ್ಮ ನಾಲಗೆಗೆ ಬಹಳ ಹಿಡಿಸಿತು.
        ಊಟ ಮುಗಿಸಿ, ಹೊರ ಬಂದಾಗ ಎಲ್ಲರೂ ಮತ್ತೆ ವಾಪಸ್ಸು ಅಲ್ಲಿಯ ತನಕ ನೆಡೆಯಲು ಆಗುವುದಿಲ್ಲ ಎಂದರು. ಆಗ ಒಂದು ಆಟೋ ಹಿಡಿದು, ಒಂದೇ ಆಟೋದಲ್ಲಿ ಐವರೂ ಹೋದೆವು. ಆ ಆಟೋ ಆ ದಿನ, ನಮಗೆಷ್ಟು ಶಾಪ ಹಾಕಿಕೊಂಡಿತೋ ಗೊತ್ತಿಲ್ಲ, ಆದರೆ ಅದರ ಗೋಳು ಆ ಎಂಜಿನ್ ಶಬ್ದದಲ್ಲಿ ಸ್ಪಷ್ಟವಾಗಿ ಕೇಳುತ್ತಿತ್ತು.

        ಆ ಸರ್ವಿಸ್ ಸೆಂಟರಿನವರು ಇನ್ನೂ ರಿಪೇರಿ ಮುಗಿಸಿರಲಿಲ್ಲ. ಶರತ್ ಹೋಗಿ ಬೇಗ ಮಾಡಿಕೊಡಿ ಅಂತ, ಆ ಮೆಕ್ಯಾನಿಕ್ ಪಕ್ಕದಲ್ಲಿ ಕುಳಿತುಕೊಂಡರು. ನಾವು ಹೋಗಿ waiting ರೂಮಿನಲ್ಲಿ ಕುಳಿತುಕೊಂಡು ಕಾಯತೊಡಗಿದೆವು.
        ನಾನೂ ಮತ್ತು ಶರತ್ ನಮ್ಮ ಬೈಕುಗಳನ್ನು ಬೆಂಗಳೂರಿನಿಂದ ಕನ್ಯಾಕುಮಾರಿಗೆ ಕಳುಹಿಸುವ ಮೊದಲೇ, ಬೈಕಿನ ಟ್ಯೂಬುಗಳಿಗೆ Puncture care solution ಅನ್ನು ಹಾಕಿಸಿಕೊಂಡಿದ್ದೆವು. Tubeless ಟೈರುಗಳಾದರೆ puncture ಆದರೂ ಸಹ ಪಂಕ್ಚರ್ ಶಾಪ್ ಸಿಗುವವೆರೆಗೆ ಹಲವಾರು ಕಿಲೋಮೀಟರು ಹೋಗಬಹುದು. ಆದರೆ ಟ್ಯೂಬುಗಳುಳ್ಳ ಟೈರುಗಳಾದರೆ ಜಾಸ್ತಿ ದೂರ ಹೋಗಲಾಗುವುದಿಲ್ಲ. ಹಾಗಾಗಿಯೇ ಟ್ಯೂಬುಗಳೊಳಗೆ ಅಂಟಿನಂತಹ ಒಂದು ದ್ರವವನ್ನು ತುಂಬಿಸಿದರೆ, ಅಕಸ್ಮಾತ್ ಪಂಕ್ಚರ್ ಆದರೂ ಸಹ, ಅದಾಗಿಯೇ ಅಂಟಿಕೊಂಡು air pressure ಕಡಿಮೆಯಾಗದಂತೆ ತಡೆಯುತ್ತದೆ. ಹಾಗಾಗಿಯೇ ನಾವು, ಆ solution ಅನ್ನು ಟ್ಯೂಬುಗಳಿಗೆ ಹಾಕಿಸಿಕೊಂಡಿದ್ದೆವು. ಶಿವು ಆ ಸೊಲ್ಯೂಷನ್ ಡಬ್ಬಿಗಳನ್ನು ಕೊಂಡಿದ್ದನಾದರೂ, ಬೆಂಗಳೂರಿನಲ್ಲಿ ಅದನ್ನು ಹಾಕಿಸಿಕೊಳ್ಳಲು ಸಮಯ ಸಿಗದೇ, ಹಾಗೇ ಬ್ಯಾಗಿನಲ್ಲಿ ತಂದಿದ್ದನು. ಆಗ ಹೇಗೂ ಇಲ್ಲಿ ಸರ್ವಿಸ್ ಸೆಂಟರಿನಲ್ಲಿ ಕಾಯುತ್ತಿರುವೆವಲ್ಲ ಎಂದು, ಆ ಮರೆತಿದ್ದ ಕೆಲಸವನ್ನು ಇಲ್ಲಿ ಮಾಡಿಸಿಕೊಂಡನು.

        ಶರತ್ ರ ಬೈಕಿನ clutch plate ಹಾಳಾಗಿದೆಯೆಂದು ಮೆಕ್ಯಾನಿಕ್ ಹೇಳಿದರು. ಸರಿ ಹೊಸದನ್ನು ಹಾಕಿ ಎಂದಾಗ, ಈಗ ಹೊಸದನ್ನು ಹಾಕಲು ಬಹಳಷ್ಟು ತಡವಾಗಬಹುದು ಎಂದರು. ಆಗ ಇಲ್ಲೊಂದು ಸ್ಪೇರ್ clutch plate ಖರೀದಿಸಿಕೊಂಡು ಒಯ್ಯುವುದಾಗಿಯೂ, ಮುಂದೆ ಹೋಗುವ ಯಾವುದಾದರೂ ಊರಿನಲ್ಲಿ ಸಮಯ ಬಿಡುವು ಮಾಡಿಕೊಂಡು ಮತ್ತೆ ಹೊಸದನ್ನು ಹಾಕಿಸಿಕೊಳ್ಳಬೇಕೆಂದು ಯೋಚಿಸಿ, ಇದ್ದುದನ್ನೇ ಮತ್ತೆ ಸರಿಯಾಗಿ adjust ಮಾಡಿ, oiling ಮಾಡಿಸಿಕೊಂಡು, ಬೈಕನ್ನು ಹೊರ ತಂದರು.

        ಅಂತೂ ನಾಲ್ಕು ಗಂಟೆಯಾಯಿತು, ನಾವು ಮತ್ತೆ ನಮ್ಮ ಪ್ರಯಾಣ ಶುರುಮಾಡುವ ವೇಳೆಗೆ.

        ಇಲ್ಲಿ ಅನಿರೀಕ್ಷತವಾಗಿ ನಾಲ್ಕು ತಾಸು ಸಮಯ ಕಾಲಹರಣವಾಗಿದ್ದರಿಂದ ನಮ್ಮ ಪ್ಲಾನ್ ಸ್ವಲ್ಪ ಏರುಪೇರಾಯಿತು. ಈಗ ನಾವು ನೋಡಬೇಕೆಂದಿದ್ದ ಒಂದು ತಾಣವನ್ನು, ಹೊರತುಪಡಿಸಿ ಸೀದಾ ಮಹಾಬಲೇಶ್ವರದ ಕಡೆಗೆ ಸಾಗುವುದಾಗಿಯೂ, ಮಹಾಬಲೇಶ್ವರ ಬೆಟ್ಟದ ಕೆಳಗೆ ಕಾಣಸಿಗುವ 'ದೋಮ್ ಲೇಕ್' ಅನ್ನು ನೋಡಬಹುದಾಗಿ ಯೋಜಿಸಿ ಬೈಕುಗಳ ವೇಗವನ್ನು ಹೆಚ್ಚಿಸಿದೆವು.

        ಅದು ಸ್ಟೇಟ್ ಹೈವೇ, ಅಲ್ಲದೇ ಡಿವೈಡೆಡ್ ಲೇನ್ ಕೂಡ ಇರಲಿಲ್ಲ. ಆದರೂ ಹೆಚ್ಚು ವಾಹನ ದಟ್ಟಣೆ ಇರಲಿಲ್ಲವಾದ್ದರಿಂದ ನಾವು ಬಹಳ ವೇಗವಾಗಿ ಸಾಗುತ್ತಿದ್ದೆವು. ನಾವು ತಮಿಳುನಾಡಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಷ್ಟೇನೂ, ಯಾವುದೋ ಬೇರೆ ರಾಜ್ಯಕ್ಕೆ ಬಂದ ಭಾವನೆಯಿರಲಿಲ್ಲ. ಪ್ರಾಯಶಃ ನಾವು ಇನ್ನೊಂದು ದಿನದಲ್ಲಿ ಕರ್ನಾಟಕ ತಲುಪುವೆವೆಂಬ ಯೋಚನೆ, ಅಲ್ಲಿ ಮನಸಲ್ಲಿ ಇದ್ದದ್ದರಿಂದಲೋ ಏನೋ. 
        ಆದರೆ ಇಲ್ಲಿ ನಾವು ನಮ್ಮ ನಾಡು ದಾಟಿ ಬಂದೆವು ಎಂಬ ಭಾವನೆ, ಒಂದು ರೀತಿಯ ಹೊಸದಾಗಿ ಏನೋ ನೋಡುತ್ತಿರುವ ಪುಳಕ, ಮುಂದೆ ಮುಂದೆ ಹೇಗಿರುವುದೋ ಎಂಬ ತಳಮಳ ಬಹಳಷ್ಟು ಇತ್ತು. ನನಗೆ ಅತ್ಯಾಕರ್ಷಕವೆಂದು ಯಾವುದೂ ಕಾಣಲಿಲ್ಲವಾದರೂ, ಸುತ್ತಲೂ ಏನಿದೆ, ಎಲ್ಲ ದೃಶ್ಯವನ್ನೂ ಕಣ್ತುಂಬಿಕೊಳ್ಳಬೇಕು, ಯಾವುದೋ ಯೋಚನೆ ಮಾಡುತ್ತಾ ಬೈಕು ಓಡಿಸಿ ಸಿಕ್ಕ ಅವಕಾಶ ಬಿಡದೆ, ಆಸಕ್ತಿದಾಯಕವಾಗಿ ಎಲ್ಲವನ್ನೂ ನೋಡಬೇಕು, ಪ್ರತಿ ಕ್ಷಣದ rideನ್ನೂ ಅನುಭವಿಸಬೇಕು, ಎಂದೆಲ್ಲಾ ಏನೇನೋ ಅಂದುಕೊಳ್ಳುತ್ತಾ, ನಾನು ಪ್ರಯತ್ನಪೂರ್ವಕವಾಗಿ ಅತ್ತಿತ್ತ, ಅತ್ತಿತ್ತ ನೋಡುತ್ತಲೇ, ನನ್ನ ಮುಂದೆ ಸಾಗುತ್ತಿದ್ದ ಶಿವೂ ಮತ್ತು ಶರತ್ ರ ಬೈಕುಗಳನ್ನು ಹಿಂಬಾಲಿಸುತ್ತಿದ್ದೆ.

        (ಆಗಿನ್ನೂ ನನಗೆ, ಕಣ್ಣು ತಂತಾನೇ ನಿರಾಯಾಸವಾಗಿ, ಅಪ್ರಯತ್ನವಾಗಿ, ಯಾವುದೋ ಮಾಯಾಲೋಕದಲ್ಲಿ ಕಳೆದುಹೋಗುವ, ಅನುಭವವಿನ್ನೂ ಆಗಿರಲಿಲ್ಲ. ಅದಕ್ಕಾಗಿಯೇ ನಾನು, ಪ್ರಯಾಣವನ್ನು ಪೂರ್ಣ ಮನಸ್ಸಿಟ್ಟು ಸವಿಯಲು ಪ್ರಯತ್ನಿಸುತ್ತಿದ್ದೆ.)

        ಮರಾಠ ನಾಡಿನ ಆ ಹಾದಿಯಲ್ಲಿ, ರಸ್ತೆಯ ಎಡ ಬಲಕ್ಕೆ ಎಷ್ಟು ದೂರ ಸಾಗಿದರೂ ಬರೀ ಬೆಳೆದು ನಿಂತ ಕಬ್ಬಿನ ಗದ್ದೆಗಳೇ ಕಾಣುತ್ತಿದ್ದವು. ಬಿಸಿಲಿಳಿದ ಸಂಜೆಯಲ್ಲಿ, ಹಸಿರಾದ ಕಬ್ಬಿನ ಗದ್ದೆಗಳ ಮೇಲೆ, ಗಾಳಿಗೆ ತೂಗಿಬಾಗುತ್ತಿದ್ದ ಕಬ್ಬಿನ ತೆನೆಗಳು ಹಸಿರು ಕೆರೆಯೊಂದರ ಸಣ್ಣ ಅಲೆಗಳಂತೆ ಭಾಸವಾಗುತ್ತಿತ್ತು. ಕಬ್ಬನ್ನು ತುಂಬಿಕೊಂಡು ಸಾಗುತ್ತಿದ್ದ ಎತ್ತಿನ ಬಂಡಿಗಳು, ಟ್ರ್ಯಾಕ್ಟರ್-ಗಳು ಒಂದರ ಹಿಂದೆ ಒಂದರಂತೆ ಆಗಾಗ ಎದುರಾಗುತ್ತಿದ್ದವು.

        ಶರತ್-ಶ್ವೇತಾ ಮತ್ತು ಶಿವೂ-ದೀಪಿಕಾರಿಗೆ ಪರಸ್ಪರ ಸಾಥಿಯಿದ್ದದರಿಂದ ಅವರುಗಳು ಹೇಗೆ ಮಾತನಾಡುತ್ತಾ, ಅನಿಸಿಕೆಗಳ ಹಂಚಿಕೊಳ್ಳುತ್ತಾ ಪ್ರಯಾಣವನ್ನು ಸವಿದರೋ ನಾನರಿಯೆ. ನನಗಂತೂ, ಬರಿ ನಾನು, ನನ್ನ ಭಾವನೆಗಳು, ನನ್ನ ಬೈಕಿನ ಶಬ್ದ ಮತ್ತು ಎದುರಿಗೆ ಕಾಣುವ ದೃಶ್ಯ ಇವಿಷ್ಟೇ ಇದ್ದವು ನನ್ನ ಪಾಲಿಗೆ.

        ಸಂಜೆ 6 ಗಂಟೆಯ ಸುಮಾರಿಗೆ, ಒಂದು ಬ್ರೇಕ್ ತೆಗೆದುಕೊಳ್ಳೋಣವೆಂದು ನಾವು ಒಂದು ಸಣ್ಣ ರಸ್ತೆಬದಿಯ ಹೋಟೆಲಿನ ಪಕ್ಕ ನಿಲ್ಲಿಸಿದೆವು. ಆದರೆ ಸಂಜೆ ಟೀ/ಕಾಫಿಗೆ ಬದಲಾಗಿ, ಅಲ್ಲಿ ಕಾಣಿಸಿದ ಕಬ್ಬಿನ-ಹಾಲು ಕುಡಿಯೋಣವೆಂದು ಕುಳಿತೆವು.

        ನಾನೂ, ಶಿವು ಮತ್ತು ಶರತ್ ದಣಿವಾರಿಸ್ಕೊಳ್ಳುತ್ತಿದ್ದೆವು. ದೀಪಿಕಾ ತಾವು ದಾರಿಯಲ್ಲಿ ಕಂಡ ವಿಷಯಗಳ ಬಗ್ಗೆ ಹೇಳುತ್ತಿದ್ದರು, "ನಾನು ಕಬ್ಬು ತುಂಬಿದ ಗಾಡಿ ಕಂಡಾಗ, ತಿನ್ನಲು ಕಬ್ಬು ಮುರಿದುಕೊಳ್ಳೋಣ ಎಂದುಕೊಂಡೆ, ಆದರೆ ಶಿವು ಬೈಕು ನಿಲ್ಲಿಸಲೇ ಇಲ್ಲ" ಅಂತ ಶಿವೂಗೆ ಬಯ್ದರು. ಶಿವೂ "ಕಬ್ಬು ಯಾಕೆ, ಕಬ್ಬಿನ-ಹಾಲನ್ನೇ ಕುಡಿ ಈಗ" ಅಂದಿದ್ದು, ತಾನು ನಿಲ್ಲಿಸದಿದ್ದು ಸರಿ ಎಂಬುದಾಗಿ ಹೇಳಿದಂತಿತ್ತು. ಶ್ವೇತಾಗೆ ಎಲ್ಲಿ ಹೋದರಲ್ಲಿ ತಮ್ಮ ಗೆಳೆಯರು ಸಿಗುತ್ತಿದ್ದರು. I mean, ನಾಯಿಗಳು, ನಾಯಿ-ಮರಿಗಳು. ಅಲ್ಲಿಯೂ ಯಾವುದೋ ಒಂದು ನಾಯಿ ಬಂದು ಅವರ ಕಾಲ ಬಳಿ ಬಾಲ ಅಲ್ಲಾಡಿಸುತ್ತಿತ್ತು. ಅವರು ಅದರೊಡನೆ ಆಡುತ್ತಾ ಬ್ಯುಸಿಯಾಗಿದ್ದರು. ನಾವು ಎರಡೆರಡು ಲೋಟ ಕಬ್ಬಿನ-ಹಾಲು ಕುಡಿದೆವು. 

        ಕುಡಿಯುತ್ತಾ ನಾನು, ಕಬ್ಬಿನ-ಹಾಲು ಕುಡಿದರೆ ಬೇಗ ನಿದ್ದೆ ಬರುತ್ತದೆ ಎಂದು, ನನ್ನ ಬಾಲ್ಯದ ಶಾಲಾದಿನಗಳಲ್ಲಿ ಒಮ್ಮೆ ಸಂಜೆಯೇ ಮನೆಯಲ್ಲಿ ಆಲೆಮನೆಯಿಂದ ತಂದಿದ್ದ ಕಬ್ಬಿನ-ಹಾಲನ್ನು ಹೊಟ್ಟೆ ತುಂಬಾ ಕುಡಿದು, ಒಂದತ್ತು ನಿಮಿಷದಲ್ಲೇ ಎಚ್ಚರವಾಗದಂತೆ ಮಲಗಿ, homework ಮಾಡದೇ ಮರುದಿನ ಶಾಲೆಗೇ ಹೋಗಿ, ಹೊಡೆತ ತಿಂದ ನೆನಪನ್ನು ಹೇಳಿದೆ. ಎಲ್ಲರೂ ನನ್ನ ಮೇಲೆ ತಿರುಗಿಬಿದ್ದರು. "ಬರೀ ಓತ್ಲಾ ವಿಷಯಗಳೇ ಆಯ್ತು, homework ಮಾಡದ ಕಳ್ಳನಿಗೆ, ಕಬ್ಬಿನ-ಹಾಲಿನ ಪಿಳ್ಳೆ ನೆವ" ಎಂದು ವಾದಿಸಿ, ಅದರಲ್ಲಿ ನನ್ನದೇ ತಪ್ಪು, ಕಬ್ಬಿನ-ಹಾಲು ನಿರಪರಾಧಿ ಎಂದು ಘೋಷಿಸಿಬಿಟ್ಟರು. ನಾಲ್ವರ ಮುಂದೆ ವಾದ ಮಾಡಲಾಗದೇ, ಹೊರಿಸಿದ ತಪ್ಪನ್ನು ಹೊತ್ತುಕೊಂಡು ಸುಮ್ಮನಾದೆ. ಆ ನಾಲ್ವರ ಮುಖದಲ್ಲೂ ಅಣಕುನಗೆ ಎದ್ದು ಕಾಣುತಿತ್ತು. ನಾನೂ ನಗಲೇಬೇಕಾಯಿತು.

        ಮುಂದೆ ಇನ್ನ ಐವತ್ತು ಕಿಲೋಮೀಟರಿನಲ್ಲಿ ದೋಮ್ ಲೇಕ್ ಸಿಗುವುದಾಗಿಯೂ, ಆದಷ್ಟೂ ಬೇಗ ಅಲ್ಲಿ ತಲುಪಬೇಕು ಅಂದುಕೊಂಡು ಇನ್ನೂ ವೇಗವಾಗಿ ಪ್ರಯಾಣ ಮುಂದುವರಿಸಿದೆವು.

        Google Map ಸರಿಯಾಗಿ ನಮ್ಮನ್ನು, ದೋಮ್ ಲೇಕ್ ಬಳಿಗೆ ತಲುಪಿಸಿತು.

        ಅಲ್ಲಿ ಕೆರೆಯಂಗಳಕ್ಕೆ ಇಳಿಯಲು ಇದ್ದ ಕಿರಿದಾದ ದಾರಿಯಲ್ಲಿ, ಬೈಕುಗಳನ್ನು ಇಳಿಸಿಕೊಂಡು. ಅರ್ಧ ನೀರಿದ್ದ ಕೆರೆಯಂಗಳಕ್ಕೆ ಬಂದು ನಿಂತೆವು. ದೂರದಲ್ಲೆಲ್ಲೋ ಒಂದಿಬ್ಬರು-ಮೂವರು ಕೆರೆಯ ದಂಡೆಯ ಮೇಲೆ ಕೂತಿದ್ದು, ತಿರುಗಾಡುತ್ತಿದ್ದು ಕಾಣಿಸಿತು ಬಿಟ್ಟರೆ, ಹತ್ತಿರದಲ್ಲಿ ಬೇರಾರು ಇರಲಿಲ್ಲ. 
        ಆ ಕೆರೆಯ ವಿಹಂಗಮ ನೋಟವನ್ನು ಸವಿಯತೊಡಗಿದ ಒಂದತ್ತು ನಿಮಿಷದಲ್ಲೇ, ಮಬ್ಬುಗತ್ತಲಾಗತೊಡಗಿತು. ಆ ಮಂದ ಬೆಳಕಲ್ಲೂ ಒಂದು ಸುಂದರ ದೃಶ್ಯ ವೈಭವ ಕಾಣುತ್ತಿತ್ತು.


Dhom Lake
        ಸುತ್ತಲೂ ಗುಡ್ಡಗಳಿಂದ ಆವೃತವಾದ ಆ ವಿಶಾಲ ಕೆರೆ, ಮನೋಹರವಾಗಿತ್ತು. ಹಲವಾರು ಫೋಟೋ ತೆಗೆದುಕೊಂಡೆವು. ಶರತ್ ಕತ್ತಲಲ್ಲಿ ಒಂದು experimentನಂತೆ flash ಲೈಟ್ ಹಿಡಿದು ನಿಂತ ನಮ್ಮಗಳ ಫೋಟೋಗಳನ್ನು ಅದ್ಭುತವಾಗಿ ಕ್ಲಿಕ್ಕಿಸಿದರು.



        ಮತ್ತೆ ಕತ್ತಲಲ್ಲಿ ತೆಗೆದ ಫೋಟೋಗಳಲ್ಲಿ, ನನ್ನ ಸಿಗ್ನೇಚರ್ ಮಾರ್ಕ್ ಶಕ್ತಿಮಾನ್ ಫೋಟೋಗಳು ಬಂದವು. ಶಕ್ತಿಮಾನ್ ಆಗಮನದಿಂದ ನನ್ನ ಜೊತೆಯಿದ್ದ ಆ ನಾಲ್ವರು ಮಧ್ಯ ವಯಸ್ಸಿನ ಮಕ್ಕಳು, ಉಲ್ಲಾಸಗೊಂಡರು. ಆ ಖುಷಿಯಲ್ಲಿ, ಶಕ್ತಿಮಾನ್ ಹಾಡಿನ ವಿಡಿಯೋ ಕೂಡ ಚಿತ್ರೀಕರಣಗೊಂಡಿತು.
(ಆದರೆ , ಆ ಫೋಟೋಗಳನ್ನು ಮತ್ತು ವಿಡಿಯೋವನ್ನು ನಾನಿಲ್ಲಿ ಶೇರ್ ಮಾಡಲಾರೆ) 


        ಜಾಸ್ತಿ ತಡ ಮಾಡುವುದು ಬೇಡವೆಂದು, ಅಲ್ಲಿಂದ ಎಲ್ಲರೂ ಹೊರಟೆವು. ಕತ್ತಲಾಗಿದ್ದರಿಂದ ನಾವು ಕೆರೆಯಂಗಳಕ್ಕೆ ಇಳಿದಿದ್ದ ಕಿರಿದಾದ ದಾರಿ ಕಾಣುತ್ತಲೇ ಇರಲಿಲ್ಲ, ನಮ್ಮ್ ಬೈಕಿನ ಲೈಟುಗಳನ್ನು ಹೊತ್ತಿಸಿಕೊಂಡೆವು. ಮೂರು ಬೈಕಿನ ದೀಪಗಳೂ (with extra lights) ಪ್ರಜ್ವಲವಾಗಿ ಉರಿಯಿತ್ತಿದ್ದವು. ಅಂದಾಜಿನ ಮೇಲೆ ಒಂದು ದಾರಿ ಹಿಡಿದು ಬಂದು, ಕೊನೆಗೂ ಮಹಾಬಲೇಶ್ವರದ ರಸ್ತೆ ಸೇರಿದೆವು.
        ಮಹಾಬಲೇಶ್ವರದ ಬೆಟ್ಟ ಹತ್ತುವ ತಿರುವು ಮುರಿವಿನ ದಾರಿಯಲ್ಲಿ, ಅದೂ ಕತ್ತಲಲ್ಲಿ ಹತ್ತುವ ಮಜವೇ ಬೇರೇ. ಬೈಕನ್ನು ಬಾಗಿಸಿ ಬಾಗಿಸಿ, ಒಂದರಿಂದೆ ಒಂದರಂತೆ ಅತ್ತ ಒಮ್ಮೆ ಇತ್ತ ಒಮ್ಮೆ ವಾಲಿಸುತ್ತಾ ವಾಲಿಸುತ್ತಾ, ಬರೀ focused headlight ಬೆಳಕನ್ನೇ follow ಮಾಡುವ thrill, ಬೇರೆಯದೇ ರೀತಿ. ಅದನ್ನು ಅನುಭವಿಸಿಯೇ ತೀರಬೇಕು.
        Riders ಗಳಿಗೇನೋ, ಇದು ಒಂದು ಥ್ರಿಲ್ ನಿಜ, ಆದರೆ ಹಿಂದೆ ಕುಳಿತ pillion riders ಗೆ??? ಅದರ ಬಗ್ಗೆ ಅವರನ್ನೇ ಕೇಳಬೇಕು.
        ಶ್ವೇತಾ comfortable ಅನಿಸುವಂತೆ ಇದ್ದರು. ದೀಪಿಕಾ ಮಾತ್ರ, ಅಲ್ಲಲ್ಲಿ ಒಮ್ಮೊಮ್ಮೆ ಕಡಿದಾದ ತಿರುವುಗಳಲ್ಲಿ ತುಸು ಭಯಗೊಂಡೆನೆಂದು ಹೇಳಿದರು.
        ಮೇಲೆ ಮೇಲೆ ಎತ್ತರಕ್ಕೆ ಹತ್ತಿದಂತೆ, ಚಳಿ ನಿಧಾನವಾಗಿ ಹೆಚ್ಚಾಗತೊಡಗಿತು. ಮಹಾಬಲೇಶ್ವರ ತಲುಪಿದ ಮೇಲೆ ಛಳಿಯ ಪ್ರಭಾವ ಪೂರ್ಣವಾಗಿತ್ತು. ನಾವು ವೇಗವಾಗಿ ಗಾಳಿಯಲ್ಲಿ ಬಂದಿದಕ್ಕೆ, ಚಳಿ ಇನ್ನೂ ಹೆಚ್ಚೆನಿಸಿ ಮೈ ನಡುಕ ಶುರುವಾಗಿತ್ತು.

        ಶರತ್ ಬುಕ್ ಮಾಡಿದ್ದ ಹೋಟೆಲಿಗೆ ಸೀದಾ ಹೋಗಿ, ಎಲ್ಲರೂ ನಮ್ಮ ಲಗೇಜುಗಳನ್ನು ಇಳಿಸಿ ನಮ್ಮ ನಮ್ಮ ರೂಮು ಸೇರಿದೆವು. ರೂಮಿನ ನೆಲವೂ ಬರಿಗಾಲಿನಲ್ಲಿ ಕಾಲಿಡದಷ್ಟು ತಣ್ಣಗಿತ್ತು. ನಮ್ಮ ವೇಷವನ್ನೆಲ್ಲಾ ಬದಲಿಸಿ, ಒಂದರ್ಧ ತಾಸು ವಿರಮಿಸಿಕೊಂಡು, ಫ್ರೆಶ್ ಆಗಿ ಊಟಕ್ಕೆಂದು ಮತ್ತೆ ಹೊರನೆಡೆದೆವು.

        ಈಗಿನ್ನೂ ರಾತ್ರಿ 9.30ರ ಸಮಯ, ಪ್ರವಾಸೀ ತಾಣವಾದರೂ ಸಹ ಅಂದು ರಜಾ ದಿನವಲ್ಲದ್ದರಿಂದ, ಅಷ್ಟು ಜನ ಸಂದಣಿಯಿಲ್ಲದೆ, ಯಾವುದೇ ಗಡಿಬಿಡಿಯಿಲ್ಲದೇ, ಊರು ತುಸು ಆರಾಮವಿದ್ದಂತೆ ಅನಿಸುತ್ತಿತ್ತು.
        ಊಟಕ್ಕೆ restaurant ಹುಡಿಕಿಕೊಂಡು, ಹಾಗೆ ಖಾಲಿ ಖಾಲಿಯಿದ್ದ ಬೀದಿಯಲ್ಲಿ ಒಂದು ವಾಕ್ ಹೊರಟೆವು. ತುಸು ದೂರ ಹೋದ ಮೇಲೆ ಒಂದಷ್ಟು ಜನರಿದ್ದ, "ಸಾಯಿ ಫುಡ್ಸ್" ಅನ್ನುವ ಒಂದು ಹೋಟೆಲ್ ಕಾಣಿಸಿತು.

        ಹೋಗಿ ಕುಳಿತ ನಾವು, ಮೆನು ನೋಡಿ ಕಾಲ ಕಳೆಯದೇ ಎಲ್ಲರೂ "ಮಹಾರಾಷ್ಟ್ರ ತಾಲಿ" ಆರ್ಡರ್ ಮಾಡಿದೆವು. ದೀಪಿಕಾ ಮಾತ್ರ ತನಗೆ ಊಟ ಬೇಡ ಬೇರೇನನ್ನಾದರೂ ಆಮೇಲೆ ಆರ್ಡರ್ ಮಾಡುವುದಾಗಿ ಕುಳಿತರು.

        ನಮ್ಮಲ್ಲಿ ದೀಪಿಕಾ ಒಬ್ಬರಿಗೆ, ಹಿಂದಿ ಅಷ್ಟು ಸಮಂಜಸವಾಗಿ ಬರುತ್ತಿರಲಿಲ್ಲ.
        ನಮ್ಮ ಊಟಕ್ಕೆ ನಾವುಗಳು ಕಾಯುತ್ತ ಕುಳಿತಿದ್ದೆವು. ಆಗ ದೀಪಿಕಾ, ಶಾಲೆಯ ಕಾಪಿರೈಟ್ ಪುಸ್ತಕದಲ್ಲಿ ಬರೆಸುವ ವಾಕ್ಯದಂತೆ, ಮನಸಲ್ಲೇ ಒಂದು ವಾಕ್ಯ ಹೊಂದಿಸಿಕೊಂಡು ಮೊಸರು ಅನ್ನವನ್ನು ಆರ್ಡರ್ ಮಾಡಿದರು. ಅವರ ವಾಕ್ಯಶೈಲಿ ಕೇಳುತ್ತಿದ್ದಂತೆ ಫಕ್ಕನೆ ಎಲ್ಲರಿಗೂ ತಡೆಯಲಾರದಷ್ಟು ನಗು ಬಂತು. ದೀಪಿಕಾಗೆ ಏನಾಯ್ತೆಂದು ತಿಳಿಯುವುದಕ್ಕೂ ಸಮಯ ಕೊಡದಷ್ಟು ನಕ್ಕೆವು. ಕೊನೆಗೆ ಅವರು "ನನಗೆ ಹಿಂದಿ ಅಷ್ಟು ಬರುವುದಿಲ್ಲ, ನೀವು ಕಲಿಸಬೇಕು, ಇಲ್ಲ ಹೆಲ್ಪ್ ಮಾಡಬೇಕು" ಅಂತ ರೇಗಿದರು.
        ನಾವು ನಾಲ್ವರೂ ಒಟ್ಟಿಗೇ,,, "ನಾವು ನಿಮಗೆ ಹಿಂದಿ ಕಲಿಸುವುದೂ ಇಲ್ಲ, ಹೆಲ್ಪ್ ಕೂಡ ಮಾಡುವುದಿಲ್ಲ, ಇನ್ನು ಮುಂದಿನ ಟ್ರಿಪ್ ಪೂರಾ ನಿಮ್ಮ ಹಿಂದಿಯ fun ಇರಬೇಕು..." ಅಂತ ಮತ್ತಷ್ಟು ನಕ್ಕೆವು.

        ನಮಗೆ ಸೊಗಸಾದ ತಾಲಿ ಊಟವೂ ಬಂತು, ದೀಪಿಕಾಗೆ ಒಂದು ಕಪ್ ಅಲ್ಲಿ ಮೊಸರು ಒಂದು ಕಪ್ ಅಲ್ಲಿ ಅನ್ನವೂ ಬಂತು, ಅದನ್ನು ನೋಡಿ ಮತ್ತೆ ನಕ್ಕೆವು.

ಮಹಾಬಲೇಶ್ವರದಲ್ಲಿ ಮಹಾರಾಷ್ಟ್ರ ತಾಲಿ
        ರುಚಿಯಾದ ಊಟ ಮುಗಿಸಿ, ಹೊರಗೆ ಬಂದು ಬೀದಿಯಲ್ಲಿ ಹಾಗೇ ಸಾಗಿದೆವು.

        ಮಹಾಬಲೇಶ್ವರ strawberry ಬೆಳೆಯುವುದಕ್ಕೆ ಪ್ರಸಿದ್ಧ. ಹಾಗಾಗಿ ನಾವು ಈ ದಿನ ಒಂದು ಸ್ಟ್ರಾಬೆರಿ ಫಾರಂ ನೋಡಬೇಕೆಂದುಕೊಂಡಿದ್ದೆವು, ತಡವಾಗಿ ಬಂದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾಳೆ ಫ್ರೆಶ್ ಸ್ಟ್ರಾಬೆರಿ ಹಣ್ಣುಗಳನ್ನು ಸವಿದರಾಯ್ತು ಎಂದುಕೊಂಡೆವು. 
        ಹಾಗೆಯೇ ಮಹಾಬಲೇಶ್ವರ, candies and fruit jellyಗೂ ಹೆಸರುವಾಸಿ. ರಸ್ತೆಯ ಎರಡೂ ಬದಿಗೆ ಸಾಲು ಸಾಲಾಗಿದ್ದ ಅಂಗಳಲ್ಲಿ ಒಂದರಲ್ಲಿ, ಹಲವಾರು ರೀತಿಯ ಕ್ಯಾಂಡೀಸ್, ಜೆಲ್ಲೀಸ್, ಮತ್ತು ಚಾಕೊಲೇಟ್ಸ್ ಕೊಂಡು ಸವಿದೆವು. ಉಳಿದವನ್ನು, ಮುಂದಿನ ಪ್ರಯಾಣ ಸಮಯದಲ್ಲಿ, ಸವಿಯಬಹುದೆಂದು ಇಟ್ಟುಕೊಂಡು, ಒಂದು ಸುತ್ತು ಊರು ಸುತ್ತಿದಂತಾಗಿ, ಮತ್ತೆ ನಮ್ಮ ಹೋಟೆಲ್ ತಲುಪಿದೆವು.

        ನಾಳೆಗೆ, ಬೆಳಗ್ಗೆ 6ಕ್ಕೇ ತಯಾರಾಗಿ, ಸುತ್ತಲಿನ ಕೆಲವು ತಾಣಗಳನ್ನು ನೋಡಲು ಹೋಗಬೇಕೆಂದು ಶರತ್ ಹೇಳಿದರು. ಅಷ್ಟು ಬೇಗ ಈ ಕೊರೆಯುವ ಚಳಿಯಲ್ಲಿ ತಯಾರಾಗಲು, ಸ್ನಾನಕ್ಕೆ ಬಿಸಿನೀರು ಬೇಕೇ ಬೇಕಿತ್ತು. ರೂಮಿನಲ್ಲಿ ಬಿಸಿನೀರು ನಾಳೆಗೆ ಬರುತ್ತದೆಯೇ ಎಂದು ಕೇಳಿ, ನಮಗೆ 5.30ರ ಸುಮಾರಿಗೇ ಬೇಕು ಎಂದು ಸರ್ವಿಸ್ನವರಿಗೆ ಮತ್ತೆ ಮತ್ತೆ ಒತ್ತಿ ಹೇಳಿ, ರೂಮುಗಳನ್ನು ಸೇರಿದೆವು.

        ಅಲಾರಂ ಸೆಟ್ ಮಾಡಿ, ಅಡಿಯಿಂದ ಮುಡಿಯವರೆಗೂ ಹೊದಿಕೆ ಹೊದ್ದು, ಕಣ್ಣು ಮುಚ್ಚಿದೆ.
* * * * *

Day-4 Ride
    - Belgavi to Mahabaleshwara
    - Disatance covered - 320 KM
    - Route Map
* * * * *

ದಿನ-5: ಮಹಾಬಲೇಶ್ವರದಿಂದ ಛತ್ರನಿಜಾಮಪುರ್ (yet to write)

Saturday, May 06, 2017

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ... (ದಿನ-3: ತುಮಕೂರಿನಿಂದ ಬೆಳಗಾವಿ)

ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ

ಮೊದ ಮೊದಲು http://kcsampath.blogspot.in/2017/03/blog-post.html
ಪಯಣಕ್ಕೊಂದು ಪಯಣ http://kcsampath.blogspot.in/2017/03/blog-post_91.html 
ದಿನ-1: ಕನ್ಯಾಕುಮಾರಿಯಿಂದ ಮದುರೈ http://kcsampath.blogspot.in/2017/04/1.html
ದಿನ-2: ಮದುರೈಯಿಂದ ತುಮಕೂರು http://kcsampath.blogspot.in/2017/04/2.html

ದಿನ-3: ತುಮಕೂರಿನಿಂದ ಬೆಳಗಾವಿ

16 ಜನವರಿ 2017
ಸೋಮವಾರ

        ಮತ್ತೆ ಬೆಳಗಾಯಿತು.
        7:30ಕ್ಕೆಂದು ಇಟ್ಟಿದ್ದ ಅಲಾರ್ಮ್ ಹೊಡೆದುಕೊಳ್ಳುತ್ತಿದ್ದರೂ, ಕಣ್ಣು ಬಿಡಲಾಗಲಿಲ್ಲ. ಮತ್ತರ್ಧ ತಾಸು ಮಲಗಿಬಿಟ್ಟೆ.

        ಈ ದಿನವೂ ಮಾಡಬೇಕಿದ್ದ long ride ನೆನಪಾಗಿ, ಕಣ್ಣುಜ್ಜಿಕೊಂಡು ಎದ್ದೆ. ಟಿವಿ ಆನ್ ಮಾಡಿ ಉದಯ ಮ್ಯೂಸಿಕ್ ಹಾಕಿದೆ, love songs ಬರುತಿತ್ತು. ಎದ್ದ ಒಂದೆರಡು ಕ್ಷಣದಲ್ಲೇ, ಮನಸ್ಸು ನಿದ್ದೆಯ ಮಂಪರಿನಿಂದ romantic moodಗೆ ಹಾರಿತು. ಹಾಡುತ್ತಾ. ಹಾಡುತ್ತಾ ತಯಾರಾದೆ.

        ಮೊದಲು ತಿಂಡಿ ಮುಗಿಸಿ, ಅಲ್ಲಿಂದ RE Service Centerಗೆ ಹೋಗಿ ಬಂದು, ಆಮೇಲೆ ನಮ್ಮ ಪ್ರಯಾಣ ಶುರುಮಾಡಬೇಕಾಗಿತ್ತು.

        ಈ ಮೊದಲೆರಡು ದಿನಗಳ ಪ್ರಯಾಣದಲ್ಲಿ, ನಮ್ಮ ಬೈಕುಗಳಲ್ಲಿ ಏನೇನು ತೊಂದರೆಯೆನಿಸುತ್ತಿದೆ ಎಂದು, ಅರ್ಥವಾಗಿತ್ತು. Long rideಗಳಲ್ಲೇ ಬೈಕುಗಳ ಸಮಸ್ಯೆಗಳು ಹೆಚ್ಚು ಕಾಣಿಸುವುದು, ಮತ್ತು ಒಬ್ಬ ನಿಜವಾದ Biker ಎಂದಿಗೂ ಆ ಸಮಸ್ಯೆಗಳಿಗೆ ಬೇಸರಿಸದೆ, ಅವನ್ನು ಕಲಿಕೆಯೆಂದು ಪರಿಗಣಿಸಿ ಸಮಸ್ಯೆಗಳನ್ನು ಪರಿಹರಿಸಿ, ತನ್ನ ಬೈಕನ್ನು ಇನ್ನಷ್ಟು ಪ್ರೀತಿಸುತ್ತಾನೆ.

        ಶರತ್, ಶಿವುರಿಗೆ call ಮಾಡಿ ಹೊರಡೋಣವೇ, ಎಂದು ಕೇಳಿಕೊಂಡು ಹೊಟೇಲಿಂದ ಹೊರಗೆ ಬಂದೆವು. ಕಳೆದ ಎರಡು ದಿನಗಳಲ್ಲಿ ಮೊದಲ ಬಾರಿಗೆ ತುಸು ಚಳಿಯಿದ್ದ ತಂಪಾದ ಬೆಳಗನ್ನು ಕಂಡಂತೆ ಅನಿಸಿತು.

        ಸೀದಾ ತುಮಕೂರಿನ ಹೆದ್ದಾರಿ ಪಕ್ಕದ ಪವಿತ್ರ ಹೋಟೆಲ್ ಗೆ ಹೋದೆವು. ಅಲ್ಲಿ ತಟ್ಟೆ ಇಡ್ಲಿ ಸಕತ್ ಫೇಮಸ್, ಬೆಂಗಳೂರು ತುಮಕೂರು ಹೆದ್ದಾರಿಯಲ್ಲಿ ಸಾಗುವ ಯಾರೂ ಅಲ್ಲಿನ ರುಚಿಯಾದ ತಟ್ಟೆಇಡ್ಲಿ ಸವಿಯದೇ ಹೋಗುವುದಿಲ್ಲ.


         ಆ ದಿನವೂ ಬಹಳಷ್ಟು ಜನರಿದ್ದರು. ನಾವು ಹೋಗಿ ಆರ್ಡರ್ ಮಾಡಿದ ಮರುಕ್ಷಣವೇ ಬಿಸಿ ಬಿಸಿ ತಟ್ಟೆಇಡ್ಲಿ ನಮ್ಮ ಮುಂದೆ ಬಂದವು. ಮೇಲೆ ಅರ್ಧಂಬರ್ಧ ಕರಗಿ ತೇಲುತಿದ್ದ ಬೆಣ್ಣೆ, ಮೊದಲ ತುತ್ತಿಗೂ ಮೊದಲೇ ಬಾಯಲ್ಲಿ ನೀರೂರಿಸಿದವು. ತಿಂಡಿ, ಕಾಫಿ ಮುಗಿಸಿಕೊಂಡು ತುಮಕೂರು ಸಿಟಿಯ ಕಡೆಗೆ ಹೊರಟ ನಾವು, ದಾರಿಯಲ್ಲಿ ಸಿಕ್ಕ ಗ್ಯಾರೇಜೊಂದರಲ್ಲಿ ನಮ್ಮ ಬೈಕುಗಳಿಗೆ ಬೇಕಿದ್ದ ಸಣ್ಣ ಪುಟ್ಟ ರಿಪೇರಿ ಮಾಡಿಸಿಕೊಳ್ಳಲು ಕುಳಿತೆವು.
        ಶಿವು ಮತ್ತು ನಾನು ಆತನ ಬೈಕಿಗೆ ಬೇಕಿದ್ದ ಬ್ಯಾಟರಿ ಕವರ್ ಕೊಳ್ಳಲು, RE Service center ಹುಡುಕಿಕೊಂಡು ಹೋದೆವು. ಒಂದತ್ತು ಕಿ.ಮೀ ದೂರದಲ್ಲಿ ಇದ್ದ ಸರ್ವಿಸ್ ಸೆಂಟರ್ ಗೆ ಹೋಗಿ, ಬರುವಷ್ಟರಲ್ಲಿ ಇಲ್ಲಿ ನಮ್ಮ ಬೈಕುಗಳೆರಡೂ ತಯಾರಿದ್ದವು. ಅಲ್ಲಿಂದ ರೂಮಿಗೆ ಹೋಗಿ, ನಮ್ಮೆಲ್ಲ ಲಗೇಜು ಹೇರಿಕೊಂಡು ಹೊರಟಾಗ ಸಮಯ ಹತ್ತಿರತ್ತಿರ 12. ನಮ್ಮ ಸುತ್ತಲೂ ಸೋಮವಾರದಂದು ಕೆಲಸಗಳಲ್ಲಿ ಬ್ಯುಸಿಯಾಗಿದ್ದ ಜನರನ್ನೂ, ಆದರೆ ಕೆಲಸವನ್ನೆಲ್ಲಾ ಮರೆತು ಆರಾಮವಾಗಿ ಪ್ರವಾಸದಲ್ಲಿರುವ ನಮ್ಮನ್ನೂ ನೋಡಿಕೊಂಡು, ಮನಸ್ಸಲ್ಲಿ ಏನೋ ಒಂದು ಉತ್ಸಾಹ ತುಂಬುವ ಖುಷಿ ಉಕ್ಕಿಬಂತು.



        ಬೆಳಗಿನ ಚಳಿ ಕಳೆದು, ಬಿಸಿಲೇರಿತ್ತು. ಬೈಕುಗಳಲ್ಲಿ ಪೆಟ್ರೋಲ್ ಸದ್ಯಕ್ಕಿದೆ, ಇನ್ನೊಂದು ನೂರೈವತ್ತು ಕಿ.ಮೀ ಸಾಗಿ ಎಲ್ಲಾದರೂ ಪೆಟ್ರೋಲಿಗೆಂದು ಬ್ರೇಕ್ ಕೊಡೋಣ ಅಂತ, ಸಾಗಿದೆವು.
        ಈ ದಿನದ ನಮ್ಮ ಪ್ರಯಾಣದ ಕೊನೆ, ಬೆಳಗಾವಿ.  450 ಕಿ.ಮೀ ದೂರವಿದೆ, ಅಲ್ಲದೆ ಉಳಿದ ಪೂರ್ತಿ ದಿನವೂ ನಮ್ಮ ಕೈಲಿದೆ.
        ಆದರೂ ನಿನ್ನೆಯಂತೆ ನಮ್ಮ ನಿಧಾನಗತಿಯಿಂದ ತಡವಾಗಬಾರದು, ಸ್ವಲ್ಪ ಸ್ಪೀಡ್-ಅಪ್ ಮಾಡಿಕೊಂಡು, ನಾವು ಎಷ್ಟು ಬೇಗ ಕ್ರಮಿಸಬಹುದು ನೋಡೋಣ ಇದರಿಂದ ನಮ್ಮ confidence ಕೂಡ ಹೆಚ್ಚುವುದರಿಂದ ಹಾಗೆ ತೀರ್ಮಾನಿಸಿ ಹೊರಟೆವು. ನಾವು ಮೂವರು ಎಲ್ಲೂ ನಿಧಾನಿಸದೆ, ಒಬ್ಬರಿಗೊಬ್ಬರು ವೇಗ ಹೊಂದಿಸಿಕೊಂಡು ಸಾಗಿದೆವು.

        ಚಿತ್ರದುರ್ಗದಲ್ಲಿ re-fuel ಮಾಡಿಕೊಂಡು, ಮತ್ತೆ ವೇಗವಾಗಿ ಮುಂದೆ ಸಾಗಿದೆವು. ಇನ್ನೇನು ದಾವಣಗೆರೆ ಸಮೀಪವಿತ್ತು. ಮುಂದಿದ್ದ ಶರತ್ ಮತ್ತು ನನ್ನ ಬೈಕುಗಳು, ಸುಮಾರು ನೂರರ ವೇಗಗದಲ್ಲಿದ್ದವು. ರಸ್ತೆ ಬದಿಯಲ್ಲಿ ನಮ್ಮಂಥವರಿಗಾಗಿ ಕಾಯುತ್ತಿದ್ದ ಪೊಲೀಸರು, ದೂರದಿಂದಲೇ ಕೈಯೊಡ್ಡಿ ನಿಲ್ಲಲು ಹೇಳಿದರು. ಎರಡು ದಿನದ ಹಿಂದೆ ತಮಿಳುನಾಡಿನ ಹೆದ್ದಾರಿಯಲ್ಲಿ ಪೊಲೀಸರಿಂದಾದ ಇರಿಸುಮುರಿಸು ನೆನಪಾಯ್ತು. ಬೈಕುಗಳನ್ನು ಅವರ ಜೀಪಿನ ಮುಂದೆ ನಿಲ್ಲಿಸಿ, ಅವರ ಹತ್ತಿರಕ್ಕೆ ಹೋದೆವು. ಹೊರಗೆ ಒಬ್ಬ ಪೇದೆ ಮಾತ್ರ ಇದ್ದರು, ಇನ್ನುಳಿದವರು ಜೀಪಿನಲ್ಲಿ ಕೂತಿದ್ದರು.
        ಹತ್ತಿರಕ್ಕೆ ಹೋದಂತೆಯೇ ಇವರೂ ಕೂಡ, "ಯಾರು ನೀವು, ಎಲ್ಲಿಗೆ ಹೋಗುತ್ತಿರುವುದು" ಎಂದು ಕೇಳಿದರು. ನಾವು ಕನ್ನಡದಲ್ಲಿ ನಮ್ಮ ವಿವರ ತಿಳಿಸಿದೆವು. ಆತ ತಕ್ಷಣವೇ, ಆಶ್ಚರ್ಯದಿಂದ ನಮ್ಮ ಬಗ್ಗೆ ವಿಚಾರಿಸತೊಡಗಿದ. "ಇಲ್ಲಿಂದ ಕಾಶ್ಮೀರದವರೆಗೂ ಹೀಗೇ ಬೈಕಲ್ಲಿ ಹೋಗುವಿರಾ??? ಬೈಕಲ್ಲೇ ಹೋಗಬೇಕೆಂದು ಯಾಕೆ ಅಂದುಕೊಂಡಿರಿ??? ಎಲ್ಲೆಲ್ಲಿ ಹೋಗಲಿದ್ದೀರಿ???" ಎಂದೆಲ್ಲಾ, ವಿಚಾರಿದ.
        ಆತನಾಗಲೇ ನಮ್ಮ ಓವರ್-ಸ್ಪೀಡನ್ನು ಮರೆತಾಗಿತ್ತು.
        ಈ ಪೊಲೀಸ್ ಮಾತ್ರ, ನಮ್ಮ ಜೊತೆಗಿದ್ದ ಶ್ವೇತಾರ ಬಗ್ಗೆ "ಯಾರೀಕೆ?" ಅಂತಲೂ ಕೂಡ, ಒಂದು ಮಾತು ಕೇಳಲಿಲ್ಲ. ನಮ್ಮ ಬಳಿಯೂ, ಅಷ್ಟೇ ಸಂಯಮದಿಂದ ವ್ಯವಹರಿಸಿದ.

        ಅಷ್ಟರಲ್ಲಿ ಹಿಂದೆ ಬರುತ್ತಿದ್ದ ಶಿವೂ-ದೀಪಿಕಾರ ಬೈಕು ನಮಗೆ ಹತ್ತಿರಾಯ್ತು. ಅವರೂ ನೂರರ ಮೇಲಿನ ವೇಗದಲ್ಲಿದ್ದರು. ನಾವು "ಅವರೂ ನಮ್ಮ ಜೊತೆಯವರು" ಎಂದಾಗ, ಆತನೇ ಅವರಿಗೆ ನಿಲ್ಲಿಸುವುದು ಬೇಡ, ಮುಂದೆ ಹೋಗಿ ಎಂದು ಕೈ ತೋರಿಸಿದ.

        ಆತ ನಮಗೆ ಶುಭ ಕೋರಿ, ಕಳುಹಿಸಿದ. ನಾವು ಮುಂದೆ ಊಟಕ್ಕೆ ಹತ್ತಿರದಲ್ಲಿ ಎಲ್ಲಿ ನಿಲ್ಲಿಸಬೇಕೆಂದು ಕೇಳಿದೆವು. ಆತ "ನಿಮಗೆ ಸಾಧಾರಣ ಹೋಟೆಲ್ ಸಾಕೆಂದರೆ, ಇಲ್ಲೇ ಇನ್ನೊಂದು ಕಿ.ಮೀ. ನಲ್ಲಿ ಟೋಲ್-ಗೇಟಿನ ಪಕ್ಕಕ್ಕೆ ಚಿಕ್ಕ ಹೋಟೆಲಿದೆ. ಅಲ್ಲಿ ತುಂಬಾ ಚೆನ್ನಾದ ಚಪಾತಿ ಊಟ ಸಿಗುತ್ತದೆ. ಅಥವಾ ತುಂಬ ಒಳ್ಳೆಯ ಹೋಟೆಲ್ ಬೇಕೆಂದರೆ, ಇಲ್ಲಿಂದ ಇನ್ನತ್ತು ಕಿ.ಮೀ, ಮುಂದೆ ಹೋಗಬೇಕು" ಅಂದ. 
        "ನಾವು ಇಲ್ಲೇ, ಟೋಲ್-ಗೇಟ್ ಬಳಿಯೇ ಊಟ ಮಾಡುತ್ತೇವೆ" ಎಂದು, ಥ್ಯಾಂಕ್ಸ್ ಹೇಳಿ ಹೊರಟೆವು.
        ಆತ ಹೇಳಿದಂತೆಯೇ, ಟೋಲ್-ಗೇಟ್ ದಾಟಿದ ತಕ್ಷಣ, ಎಡಕ್ಕೆ ಚಿಕ್ಕ ಹೋಟೆಲ್ ಕಾಣಿಸಿತು. ಒಂದು ಚಿಕ್ಕ ಕೈತೋಟದ ನಡುವೆ ಮನೆಯಂತೆ ಇದ್ದ ಅಲ್ಲಿ, ನಮ್ಮನ್ನು ಬಿಟ್ಟರೆ ಬೇರಾರೂ ಜನ ಇರಲಿಲ್ಲ.
        ನಾವು ಎಲ್ಲರಿಗೂ ಚಪಾತಿ ಊಟ ಆರ್ಡರ್ ಮಾಡಿದೆವು, ಹೋಟೆಲಿನವನು ಇನ್ನೊಂದು ಕಾಲು ಗಂಟೆ ಸಮಯದಲ್ಲಿ ಊಟ ರೆಡಿ ಮಾಡುವುದಾಗಿ ಹೇಳಿದ. ನಾವು ತುಮಕೂರಿನಿಂದ ಸುಮಾರು 200 ಕಿ.ಮೀ ದೂರವನ್ನು ಬರಿ ಎರಡೂವರೆ ಗಂಟೆಗಳಲ್ಲಿ ಕ್ರಮಿಸಿ ಬಂದಿದ್ದರಿಂದ, ಸ್ವಲ್ಪ ದಣಿವಾರಿಕೊಳ್ಳುತ್ತಾ ಕುಳಿತೆವು. 
        ಹೇಳಿದಂತೆ, ಹದಿನೈದು ನಿಮಿಷದಲ್ಲಿ ಬಿಸಿ ಬಿಸಿ ಚಪಾತಿ ನಮ್ಮೆದುರು ಬಂದವು. ಬಹಳ ರುಚಿಯಾಗಿತ್ತು ಊಟ. Extra extra ಚಪಾತಿ ತಿಂದು, ಊಟ ಮುಗಿಸುವಷ್ಟರಲ್ಲಿ, ನಮಗೆ ಇಲ್ಲಿಗೆ ಬರಲು ಹೇಳಿದ ಪೊಲೀಸರೂ ಅಲ್ಲಿಗೆ ಬಂದರು. ಮತ್ತೆ ಅವರಿಗೆ ಥ್ಯಾಂಕ್ಸ್ ಹೇಳಿ, ನಮ್ಮ ಪಯಣ ಮುಂದುವರಿಸಿದೆವು. 
        ಇನ್ನು ಮುಂದಿನ ಬ್ರೇಕ್ ಹಾವೇರಿ ಬಳಿ ಇರುವ ರಾಕ್ ಗಾರ್ಡನ್ ಗೆ ಎಂದು ತೀರ್ಮಾನಿಸಿದ್ದೆವು. ನನಗೆ ಸರಿಯಾಗಿ ಅದರ ಲೊಕೇಶನ್ ಗೊತ್ತಿರಲಿಲ್ಲ ಆದರೆ, ಹಾವೇರಿ ಎಂದು ಕೇಳಿಸಿಕೊಂಡಿದ್ದೆ, ಅಷ್ಟೇ.
        ಇನ್ನೂ 111 ಕಿ.ಮೀ ದೂರವಿದ್ದರಿಂದ ನಾವು ದೂರ ದೂರ ಉಳಿದು ಸಾಗುತ್ತಾ, ನಾನು ಪೂರ್ತಿ ಹಿಂದಾಗಿಬಿಟ್ಟೆ. ಹಾವೇರಿ ಎಂದು ಹೆಸರು ಕೇಳಿಕೊಂಡಿದ್ದ ನಾನು, ಹೆದ್ದಾರಿಯಲ್ಲಿ ಸಾಗುತ್ತಾ ಹಾವೇರಿಗೆ ಎಡ ತಿರುವು  ಎಂದು ಬರೆದಿದ್ದ ಬೋರ್ಡ್ ನೋಡಿ,  ಇವರೂ ಇತ್ತ ಕಡೆಯೇ ಹೋಗಿರಬಹುದೆಂದು, ಹಾವೇರಿ ಕಡೆಗೆ ಸಾಗಿಬಿಟ್ಟೆ.
        ಹಾವೇರಿ ಸಿಟಿ ಒಳಗೆ ಹೋಗಿ, ಅವರು ಎತ್ತ ಸಾಗಿದರೆಂದು ತಿಳಿಯದೆ,  ಫೋನ್ ಮಾಡಿದರೆ ಯಾರಿಗೂ ಫೋನ್ connect ಆಗಲಿಲ್ಲ. ಸುಮಾರು 20 ನಿಮಿಷ ಕಾದ ಮೇಲೆ, ಶ್ವೇತಾ ಫೋನ್ ಮಾಡಿದರು. "ನಾನು ಹೀಗೆ ಹಾವೇರಿಯ​ ಸಿಟಿ entrance ಅಲ್ಲಿ ಇದೀನಿ. ನೀವೆಲ್ಲ ಎಲ್ಲಿದಿರಾ" ಅಂದೆ.
        "ಹಾವೇರಿಗೇಕೆ ಹೋದ್ರಿ?,,, ನಾವು ಹೆದ್ದಾರಿಲೇ ಮುಂದೆ ಬಂದು ಹುಬ್ಬಳ್ಳಿ ಕಡೆಗೆ ಹೋಗ್ತಿದಿವಿ... ವಾಪಸ್ ಬನ್ನಿ" ಅಂದ್ರು. ಅಲ್ಲಿಂದ ಮತ್ತೆ ವಾಪಸ್ ಹೊರಟು, ಹೆದ್ದಾರಿ ತಲುಪಿ ವೇಗವಾಗಿ ಸಾಗಿದೆ.
        ಅವರು, ನಾನೂ ಬರಲಿ ಎಂದು, ನಿಧಾನವಾಗಿ ಹೋಗುತ್ತಿದ್ದರು. ಅವರನ್ನು ಕೂಡಿಕೊಂಡು ಇನ್ನೊಂದು ಐವತ್ತು ಕಿ.ಮೀ ಸಾಗಿದ ಮೇಲೆ, ರಸ್ತೆಯ ಎಡಕ್ಕೆ ಉತ್ಸವ್ ರಾಕ್ ಗಾರ್ಡನ್, ಸಿಕ್ಕಿತು.

        ಈ ದಿನ ಪ್ಲಾನಿನಲ್ಲಿ ಸಂತೇಬೆನ್ನೂರಿನ ಬಳಿಯ ಕಲ್ಯಾಣಿಯನ್ನು ಕೂಡ ನೋಡುವ ಮಾತಿತ್ತು, ಆದರೆ ಸಮಯದ ಅಭಾವ ಮತ್ತು ನಾವು ಸಾಗಬೇಕಿದ್ದ ದೂರದಿಂದಾಗಿ, ಬರಿಯ ಹೆದ್ದಾರಿಯ ಪಕ್ಕದಲ್ಲೇ ಸಿಗುವ ರಾಕ್ ಗಾರ್ಡನ್ ಒಂದನ್ನಷ್ಟೇ ನೋಡಿ, ಮುಂದೆ ಸಾಗಬೇಕಾಯಿತು.
       


        ಈ ದಿನ ಸೋಮವಾರವಾದ್ದರಿಂದ ಅಷ್ಟೇನೂ ಜನ ಸಂದಣಿಯಿರಲಿಲ್ಲ ಅಲ್ಲಿ. ನಮ್ಮ ಬೈಕುಗಳನ್ನು luggage ಸಮೇತ ಎದುರಲ್ಲೇ park ಮಾಡಿ, ಒಳಗೆ ಹೋದೆವು. ಟಿಕೆಟ್ ಕೊಂಡು ಒಳಗೆ ಹೊಗುತ್ತಿದಂತೆ, ಅಲ್ಲಿ baggage ಕೌಂಟರಿನ ಹುಡುಗ, ಇನ್ನ ಅರ್ಧ ಗಂಟೆ ಅಷ್ಟೇ ಇದು ಓಪನ್ ಇರೋದು, ಅಷ್ಟರಲ್ಲಿ ನೋಡಿಕೊಂಡು ವಾಪಸ್ ಬರಬೇಕು ಅಂತ ಹೇಳಿ, ನಮ್ಮ jackets, knee pads ಗಳನ್ನೆಲ್ಲ ಅಲ್ಲಿ ಇರಿಸಿಕೊಂಡ.

        ಮೊದಲ ಅಂಕಣದಲ್ಲಿ ಕಣ್ಣಿಗೆ ಕಾಣುವುದೆಲ್ಲ, ಬಾರಿಯ ರಾಜಕುಮಾರ್ ಅಭಿನಯಿಸಿದ ಪಾತ್ರಗಳ ಪ್ರತಿಕೃತಿಗಳು. ಕೆಲವು ಬರಿಯ ಹೋಲಿಕೆಯಂತಿದ್ದರೆ, ಕೆಲವು ಅಚ್ಚು ರಾಜಕುಮಾರ್ ಅವರ ಪ್ರತಿರೂಪಿನಂತಿದ್ದವು. ಬೇಡರ ಕಣ್ಣಪ್ಪ ಶಿವಲಿಂಗಕ್ಕೆ ಕಣ್ಣು ನೀಡುವುದು, ಕನಕದಾಸ ಪಾತ್ರ, ಸತ್ಯ ಹರಿಶ್ಚಂದ್ರ, ಕವಿರತ್ನ ಕಾಳಿದಾಸ, ಮಯೂರ ಹೀಗೆ ಹತ್ತಿಪ್ಪತ್ತು ಪ್ರತಿಕೃತಿಗಳು ವೀಕ್ಷಣಾ ಮಾರ್ಗದ ಮೊದಲಿಗೆ ಸಿಗುತ್ತವೆ.

ಕವಿರತ್ನ ಕಾಳಿದಾಸನಾಗಿ ಡಾ|| ರಾಜಕುಮಾರ್
        ದಾಟಿ ಎರಡನೇ ಅಂಕಣಕ್ಕೆ ಒಳ ನೆಡೆದರೆ, modern art ನ ಅನಾವರಣ. ಒಳಾಂಗಣದಲ್ಲಿ ಹೆಮ್ಮರ ಒಂದರ ಪ್ರತಿಕೃತಿಯೊಳಗೆ, ಪ್ರಕೃತಿಯಲ್ಲಿ ಮಾನವ ಜೀವ ವಿಕಸನವನ್ನೇ ರೂಪಿಸಿದ್ದಾರೆ. ಗಾಜು ಮತ್ತಿತರ ವಸ್ತುಗಳಿಂದ ರೂಪಿಸಿದ್ದ ಆ ಕಲಾಕೃತಿ, ಸಾವಿರಾರು ಅರ್ಥ ಕೊಡುವಂತಿತ್ತು.

        ಮುಂದೆ ಸಾಗಿದರೆ, ಹಲವಾರು ಕಲಾಕೃತಿಗಳು ಸಾಲು ಸಾಲಾಗಿ ನಿಂತಿದ್ದವು. ಇನ್ನೊಂದು ಅಂಕಣದಲ್ಲಿ ನಮ್ಮೆಲ್ಲ ಸಂಪ್ರದಾಯಗಳ ಪರಿಚಯವಿತ್ತು. ಹುಟ್ಟು, ಬಾಲ್ಯ, ಮುಂಜಿ, ಮದುವೆ ಮತ್ತು ಸಾವಿನ ಪರಿಚಯ. ಹಲವು ಧರ್ಮಗಳ ಆಚಾರಗಳಂತೆ ಮದುವೆಯ ಶಾಸ್ತ್ರಗಳ ಪ್ರತಿಕೃತಿಗಳು ಇನ್ನೊಂದು ಕಡೆಯಿದ್ದವು.

        ಒಳಾಂಗಣವನ್ನೆಲ್ಲ ದಾಟಿ ಹೊರನೆಡೆದರೆ, ನಮ್ಮ ಕರುನಾಡ ಸಂಸ್ಕೃತಿಯ, ಹಳ್ಳಿ ಜೀವನವನ್ನು ನಮ್ಮೆದುರು ತೆರೆದಿಡುವ ಅಮೋಘ ಕಲಾ ರಾಶಿ ಕಾಣ ಸಿಗುತ್ತದೆ.

        ಮೊದಲಿಗೆ ಹಳ್ಳಿಯಲ್ಲಿರುತ್ತಿದ್ದ ಹಲವಾರು ಕಸುಬು ಆಧಾರಿತ ಕುಟುಂಬಗಳ ಮನೆಗಳು (ಕುಂಬಾರರು, ಕಮ್ಮಾರರು, ಚಮ್ಮಾರರು, ಮರಗೆಲಸದವರು), ಅವರ ಕೆಲಸಗಳ ರೀತಿಗಳು ಎಲ್ಲದರ ಪಡಿಯಚ್ಚು ಕಾಣುತ್ತವೆ.
       ಹಳ್ಳಿಯ ಗೌಡರ ಮನೆಯ ವಾತಾವರಣ, ಹಳ್ಳಿಯ ಬ್ರಾಹ್ಮಣರ ಮನೆಯ ಜಗುಲಿ, ಅಕ್ಕಸಾಲಿಗರ ಅಂಗಡಿ, ಬಳೆಗಾರನ ಸುತ್ತುವರಿದ ಹೆಂಗೆಳೆಯರು, ಹೀಗೆ ಹತ್ತು ಹಲವಾರು ಹಳ್ಳಿಯ ಚಿತ್ರಣಗಳನ್ನು, ಬಣ್ಣ ಕಟ್ಟಿ ಬರೆದಷ್ಟು ಸ್ಪುಟವಾಗಿ ಸೃಷ್ಟಿಸಿ ಇಟ್ಟಿದ್ದಾರೆ.

ಹಳ್ಳಿಯ ಗೌಡರ ಚಾವಡ

ಬ್ರಾಹ್ಮಣರ ಮನೆಯ ಜಗುಲಿ

ಗರಡಿಮನೆಯ ಕುಸ್ತಿ ಅಖಾಡ
        ಕೆರೆಯಂಗಳ, ಉಳುವ ರೈತ, ಕೊಟ್ಟಿಗೆ, ಮಲ್ಲಗಂಬ, ಗರಡಿ ಮನೆಗಳನ್ನೆಲ್ಲ ನೋಡಿ, ಹಳ್ಳಿಯಿಂದ ಹೊರಬಂದು ಪಟ್ಟಣಕ್ಕೆ ಕಾಲಿಟ್ಟಂತೆಯೇ,,, ಕೊನೆಯಲ್ಲಿ ಹೋಟೆಲೊಂದು ಕಾಣುತ್ತದೆ.
        ನಮಗೆ ತಿನ್ನಲು ಏನಾದರೂ ಸಿಗಬಹುದೆಂದು ಹತ್ತಿರಕ್ಕೆ ಹೋದಾಗ ತಿಳಿಯಿತು, ಅದು ಈಗಿನ cafe ಒಂದರ ಪ್ರತಿರೂಪ ಅಷ್ಟೇ ಎಂದು. ಅಲ್ಲಿ ಒಂದು ಟೇಬಲ್ಲಿನಲ್ಲಿ ರಮ್ಯಾ-ಪುನೀತ್ ರಾಜಕುಮಾರ್ ಕೂಡ, ಎಂದೂ ಖಾಲಿಯಾಗದ ಕಾಫಿ ಕಪ್ ಗಳ ಎದುರು, ಒಬ್ಬರನ್ನೊಬ್ಬರು ನೋಡುತ್ತಾ ಕಣ್ಣು ಮಿಟುಕಿಸದೇ ಕುಳಿತಿದ್ದರು. ನಾವೂ ನೋಡಿ ನಕ್ಕು ವಾಪಸ್ಸಾದೆವು.  

        ನಮಗೆ ಒಂದು ಬ್ರೇಕ್ ಸಿಕ್ಕ ಹಾಗೆ ಆಯಿತಾದರೂ, ಆ ರಾಕ್ ಗಾರ್ಡನ್, ಅತ್ತ ಹೋದಾಗ ಎಲ್ಲರೂ ಒಮ್ಮೆ ನೋಡಲೇಬೇಕಾದ ಜಾಗ.

        ರಾಕ್ ಗಾರ್ಡನ್ ರಾಕ್ ಹೋಟೆಲಿನಲ್ಲಿ ತಿನ್ನಲು ನಮಗೇನು ಸಿಗದಿದ್ದರಿಂದ, ನಾವು ನಮ್ಮ Coffee Breakಗೆ ಹುಬ್ಬಳ್ಳಿಗೆ ಹೋಗೋಣ, ಅಲ್ಲಿ ಕಾಫಿ ಜೊತೆಗೆ ಗಿರ್ಮಿಟ್ ಕೂಡ ಸವಿಯಬಹುದು ಎಂದುಕೊಂಡೆವು. ಹುಬ್ಬಳ್ಳಿಯ ಗಿರ್ಮಿಟ್ ಶಾಪ್ ಅಂತ ಗೂಗಲ್ ಮ್ಯಾಪ್ ನಲ್ಲಿ ಹುಡುಕಿಕೊಂಡು ಹೊರಟೆವು. 
        ಇನ್ನ ನಲವತ್ತು ನಿಮಿಷಗಳ ಪ್ರಯಾಣದ ನಂತರ ಹುಬ್ಬಳಿತಲುಪಿದೆವು. ಆದರೆ ಆ ಗಿರ್ಮಿಟ್ ಅಂಗಡಿ, ಊರ ಒಳಗೆಲ್ಲೋ ಇನ್ನೈದು ಕಿ.ಮೀ ನಲ್ಲಿದೆ ಎಂದು ತೋರಿಸುತಿತ್ತು. ಅಷ್ಟೇ ಅಲ್ಲವಾ ಎಂದು ಹೊರಟರೆ, ಅದು ಮಾರ್ಕೆಟ್ ರೋಡೊಂದರ ಒಳಗೆ ನುಸುಳಿ, ಗಲ್ಲಿಗಲ್ಲಿಯಂತ ರೋಡಿನಲ್ಲಿ ಸಾಗಿ, ಸಾಗಾಣೆ ಲಾರಿಗಳಿಂದ Traffic jam ಆಗಿ, ಅಲ್ಲಿಗೆ ತಲುಪುವಷ್ಟರಲ್ಲಿ ಯಾಕಾದರೂ ಹುಬ್ಬಳ್ಳಿ ಊರೊಳಗೆ ಬೈಕನ್ನು ತಿರುಗಿಸಿದೆವೋ ಅನ್ನಿಸಿತು. 
        ಕೊನೆಗೂ ಬೈಕುಗಳು 'ಆಯಟ್ಟಿ ಸ್ಪೆಷಲ್ ಗಿರ್ಮಿಟ್ ಶಾಪ್' ಎದುರು ನಿಂತವು. ಬೇಗನೆ ಒಳ ಹೋಗಿ, ಗಿರ್ಮಿಟ್ ಮತ್ತು ಬಿಸಿ ಮಿರ್ಚ್ಚಿ ಬಜ್ಜಿ ಆರ್ಡರ್ ಮಾಡಿದೆವು. ಅದು ತೀರಾ ಚಿಕ್ಕ ಒಂದೇ ರೂಮಿನ ಹೋಟೆಲ್. ನಾವು ಐವರೂ ಒಳಗೆ ಕುಳಿತಿದ್ದಷ್ಟಕ್ಕೆ, ಹೋಟೆಲ್ ಭರ್ತಿಯಾಯಿತು (ಹೌಸ್ ಫುಲ್). 

ಹುಬ್ಬಳ್ಳಿಯ ಮಿರ್ಚಿ-ಗಿರ್ಮಿಟ್
        ನಮ್ಮ ಕೈಗಳಲಿದ್ದ ಗಿರ್ಮಿಟ್ ತಿನ್ನುವಾಗ, ಅಷ್ಟು ದೂರ ಬಂದಿದ್ದು ವ್ಯರ್ಥವಾಗಲಿಲ್ಲ ಅನಿಸಿತು. ಟೀ ಕುಡಿದು, ಮತ್ತೆ ನಮ್ಮ ಪ್ರಯಾಣ ಬೆಳಗಾವಿಯ ಕಡೆಗೆ ಹೊರಟಿತು.

        ಬೆಳಗಾವಿಯಲ್ಲಿ ಉಳಿಯಲು ಹೋಟೆಲನ್ನು ಶರತ್ ಆಗಲೇ ಬುಕ್ ಮಾಡಿದ್ದರು. ನಾವೀಗ ಮತ್ತೆ 100KM ಸಾಗಬೇಕಿತ್ತು. ಆ ಇಕ್ಕಟ್ಟಿನ ಮಾರ್ಕೆಟ್ ರೋಡುಗಳಿಂದ ನುಸುಳಿ ಹೊರಬರುವಷ್ಟರಲ್ಲಿ, ನಾನು, ಶರತ್ ಮತ್ತು ಶಿವೂರನ್ನು ಫಾಲೋ ಮಾಡಲು ಆಗದೆ ದಾರಿ ತಪ್ಪಿದೆ. ಮುಂದೆ ಮತ್ತೆ ಹೆದ್ದಾರಿಗೆ ಬನ್ನಿ ಸಿಗುವುದಾಗಿ ಫೋನ್ ಮಾಡಿ ಹೇಳಿ, ನಾನೂ ಮ್ಯಾಪ್ ಹಾಕಿಕೊಂಡು ಹುಬ್ಬಳ್ಳಿಯಿಂದ ಹೊರಬಿದ್ದೆ. 

        ಅವರೂ ಹೆದ್ದಾರಿಯಲ್ಲಿ ನಾನಿದ್ದ ಜಾಗಕ್ಕೆ ಬಂದರು, ಮುಂದೆ 100km ಗಳ ದಾರಿ ತುಸು ನಿರಾಯಾಸವಾಗಿ ಕಂಡಿತು. ಕತ್ತಲಾವರಿಸಿ ಸಮಯ 8 ಘಂಟೆಯಾಗಿದ್ದರೂ, ಹೆದ್ದಾರಿಯಲ್ಲಿ lane reflectorಗಳು ಅಚ್ಚುಕಟ್ಟಾಗಿ ಇದ್ದು, ರಸ್ತೆಯೂ ಅದ್ಭುತವಾಗಿತ್ತು. ಎಲ್ಲರೂ ನಮ್ಮ ನಮ್ಮ ಪಾಲಿನ ರೈಡನ್ನು ನಮ್ಮಿಷ್ಟದ ವೇಗದಲ್ಲಿ enjoy ಮಾಡುತ್ತಾ ಸಾಗಿದೆವು. 
        ನಾನು 140km/hr ನಷ್ಟು ವೇಗವನ್ನು ತಲುಪಿ, ನನ್ನ ಬೈಕು ಈಗಲೂ ಒಳ್ಳೆಯ condition ನಲ್ಲಿದೆ ಅಂದು ಖುಷಿಪಟ್ಟೆ. 

        ಸುಮಾರು ಒಂದೂವರೆ ತಾಸಿನಲ್ಲಿ ಬೆಳಗಾವಿ ತಲುಪಿ, ಹೋಟೆಲ್ ಹನುಮಾನ್ ಮುಂದೆ ಬೈಕು ನಿಲ್ಲಿಸಿದಾಗ, ಸಮಯ 9.30. 
        ಮತ್ತೆ ನಮ್ಮ ಗಂಟು ಮೂಟೆಯನ್ನೆಲ್ಲ ಬೈಕುಗಳಿಂದ ಬಿಚ್ಚಿ, ರೂಮೊಳಗೆ ಇಟ್ಟು, fresh ಆಗಿ ಊಟಕ್ಕೆ ಹೊರಬಂದಾಗ 10PM.

        ಶರತ್-ಶ್ವೇತಾ ಮತ್ತು ನಾನು, ಅಷ್ಟು ಹಸಿವಿರದಿದ್ದರಿಂದ ಅಲ್ಲಿಯೇ ಬೆಳಗಾವಿಯ ಚಾಟ್ ಸ್ಟ್ರೀಟ್ ನಲ್ಲಿ, ಐಸ್ ಕ್ರೀಮ್ ಹಣ್ಣು ಹಂಪಲನ್ನು ತಿನ್ನುವುದಾಗಿ ಅತ್ತ ಸಾಗಿದರೆ. ಶಿವೂ-ದೀಪಿಕಾಗೆ ಆರೋಗ್ಯಕರ ಊಟ ಬೇಕಾಗಿ ಎದುರಿಗಿದ್ದ restaurant ಕಡೆಗೆ ಸಾಗಿದರು. 

        ನಾಳೆ ಸುಮಾರು 8ಕ್ಕೆ, ಎಲ್ಲರೂ ತಿಂಡಿ ಮುಗಿಸಿ ಹೊರಟುಬಿಡೋಣವೆಂದು ಕೊಂಡು ರೂಮುಗಳನ್ನು ಸೇರಿದೆವು.

        ಇಷ್ಟು ದಣಿದು ರೂಮೊಳಗೆ ಸೇರಿದರೂ, ಮಲಗಲು ಇನ್ನೂ ಒಂದು ತಾಸು ಬೇಕಾಗುತ್ತಿತ್ತು ನಮಗೆ.
        ದಿನವೆಲ್ಲ ರಸ್ತೆ ಪ್ರಯಾಣದ ಪರಿಣಾಮ, ನಾವು ಧೂಳು, ಬೆವರಿನಿಂದ ತುಂಬಿಹೋಗಿರುತ್ತಿದ್ದರಿಂದ, ಸ್ನಾನ ಮಾಡಿಯೇ ಮಲಗಬೇಕಾಗುತ್ತಿತ್ತು. ಅಲ್ಲದೇ ಇಲ್ಲಿಂದ ಮುಂದೆ-ಮುಂದೆ, ನಮ್ಮ ಬಟ್ಟೆಗಳನ್ನೂ ನಾವು ತೊಳೆದು, ರಾತ್ರಿಯೆಲ್ಲ ಒಣಗಲು ಹಾಕಬೇಕಾಗುತ್ತಿತ್ತು.
        ಎಲ್ಲಿಯೂ ಒಂದು ರಾತ್ರಿಗೆ ಹೆಚ್ಚು ಉಳಿಯುತ್ತಿರಲಿಲ್ಲವಾದ್ದರಿಂದ ಹೋಟೆಲಿನ ಲಾಂಡ್ರಿಯನ್ನೂ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ನಮ್ಮ ನಿತ್ಯದ ಬಟ್ಟೆಗಳನ್ನು ತೊಳೆದು ಒಣಗಲು ಹಾಕಿ ಮಲಗುತ್ತಿದ್ದೆವು. 

        ಬೆಳಗಾವಿಯ ಇರುಳು ಅಷ್ಟು ಬಿಸಿಯಿಲ್ಲದಿದ್ದರೂ, ಚಳಿಯಂತೇನೂ ಅನ್ನಿಸಲಿಲ್ಲ. ಬೆಳಗ್ಗೆಗೆ ಅಲಾರಾಂ ಇಟ್ಟು, ಕಣ್ಮುಚ್ಚಿದಂತೆಯೇ ಸಣ್ಣ ಪುಟ್ಟ ಕನಸಿನ ರಾಶಿ ತೆರೆದುಕೊಳ್ಳತೊಡಗಿತು. 


Day-3 Ride
    - Tumkur to Belgavi
    - Disatance covered - 450 KM
    - Route Map

* * * * *

ದಿನ-4: ಬೆಳಗಾವಿಯಿಂದ ಮಹಾಬಳೇಶ್ವರ http://kcsampath.blogspot.fr/2017/05/4.html