ಇದು,
ನಮ್ಮೊಲ್ಮೆಯ ಹಾಸನ,
ನವೋಲ್ಲಾಸ ಚೇತನ.
ಬಿಸಿಲ್ ಮಳೆಗಳ ಹೂರಣ,
ಚಳಿ ಮಂಜಿನ ಚಾರಣ.
ಗಿರಿಮಲೆಗಳ ತೋರಣ,
ಕನ್ನಡ ಕಲಾ ಭೂಷಣ...
ಇಲ್ಲಿ,
ಕಾಣಿಸದೇನ್ ಸಗ್ಗ,
ಶಿಲ್ಪ ಕಲೆಗಳ ಕಗ್ಗ.
ಜಿನನಾಥನ ಯೋಗ,
ಹೊಯ್ಸಳ ತೋಳ್ ಖಡ್ಗ.
ಮಲೆನಾಡಿನ ದಿಬ್ಬ,
ಉದಯಾಸ್ತಮ ಹಬ್ಬ...
ಇಲ್ಲಿ,
ಶಿಲೆ ಬಲ್ಲುದು ಶಾಂತಲೆ ನೃತ್ಯ,
ನೆಲ ಬಲ್ಲುದು ಧರ್ಮದ ಸತ್ಯ.
ಜನ ಬಲ್ಲುದು ನೇಗಿಲ ನೇಮ,
ಜಲ ಬಲ್ಲುದು ಹೇಮೆಯ ಪ್ರೇಮ.
ಹವೆ ಬಲ್ಲುದು ಬಿಸಿಲೆಯ ತಂಪು,
ಸುಖ ಬಾಳ್ವೆಯ ಸಮ್ಮೋಹಕ ಕಂಪು...
ಇದು,
ಸಪ್ತಮಾತೃಕೆ ಶ್ರೀವನ,
ಚೆನ್ನಕೇಶವ ನಂದನ.
ಹಸಿರ್ತೋಟದ ಭೂವನ
ಕುಳಿರ್ಗಾಳಿಯ ಗಾಯನ.
ನವಸ್ಪೂರ್ತಿಯ ಸಿಂಚನ
ಕವಿರಸಿಕರಿಗೆ ಅಂಗಣ...
ಬಾ,,, ಕಡೆಯುವ ಎದೆ ಎದೆಯಲು,
ಸವಿ ಜೀವನ ಶಾಸನ...
ಇದೇ ಅಲ್ಲವೇ
ಕವಿ ಶಿಲ್ಪಿಗೆ ಸಿಂಹಾಸನ...
- ಹಾಸನಿಗ
ಕೆ. ಸಿ. ಸಂಪತ್ ಕುಮಾರ್

No comments:
Post a Comment